ಮಡಿಕೇರಿ | ಆಫ್ರಿಕನ್ ಹಂದಿ ಜ್ವರ ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ: ಡಾ.ಸುರೇಶ್ ಭಟ್
ಮಡಿಕೇರಿ ಅ.27 : ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು. ಇಲ್ಲಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಪಿ.ಸುರೇಶ್ ಭಟ್ ಅವರು ತಿಳಿಸಿದರು.
ನಗರದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹಂದಿ ಸಾಕಾಣಿಕ ಕೇಂದ್ರದ 1 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ ಎಂದರು.
ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಆಫ್ರಿಕನ್ ಹಂದಿ ಜ್ವರದಿಂದ ಮನುಷ್ಯನ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಉಂಟಾಗುವುದಿಲ್ಲ. ಹಂದಿಮಾಂಸವನ್ನು ಸೇವಿಸುವವರು ಚೆನ್ನಾಗಿ ಬೇಯಿಸಿ ಹಂದಿ ಮಾಂಸ ಸೇವಿಸಬೇಕು. ಹೊರಗಿನ ಹಂದಿ ವ್ಯಾಪಾರಸ್ಥರು ಹಾಗೂ ಅನಧಿಕೃತ ವ್ಯಕ್ತಿಗಳು ಹಂದಿ ಮನೆಗಳಿಗೆ ಪ್ರವೇಶಿಸಿದಂತೆ ನಿಷೇಧಿಸುವುದು. ಹಂದಿ ಮನೆಗಳನ್ನು ಕ್ರಿಮಿನಾಶಕ ಹಾಗೂ ಬಿಸಿ ನೀರಿನಿಂದ ಪ್ರತಿನಿತ್ಯ ತೊಳೆಯಬೇಕು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.
ಹಂದಿಗಳ ಮೂಗು ಹಾಗೂ ಕಣ್ಣಿನಲ್ಲಿ ಕೀವು ಬರುವುದು ಕಂಡುಬಂದರೆ ಅದು ಆಫ್ರಿಕನ್ ಹಂದಿ ಜ್ವರ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ಹಂದಿಗಳು ಒದ್ದಾಡಿ ದಿಢೀರ್ ಸಾಯುತ್ತವೆ. ಕಿವಿ, ಬಾಲ, ಹೊಟ್ಟೆಯ ಕೆಲಭಾಗದಲ್ಲಿ ಕೆಂಪಾಗುವುದು, ಉಸಿರಾಟದ ತೊಂದರೆ, ತೀವ್ರ ಜ್ವರ ಆಫ್ರಿಕನ್ ಹಂದಿ ಜ್ವರದ ಲಕ್ಷಣ ಎಂದು ಅವರು ಮಾಹಿತಿ ನೀಡಿದರು.
ರೋಗಪೀಡಿತ ಪ್ರದೇಶಗಳಿಂದ ಹಂದಿ ಮತ್ತು ಹಂದಿ ಉತ್ಪನ್ನಗಳ ಆಮದನ್ನು ನಿಲ್ಲಿಸಿವುದು. ರೋಗಪೀಡಿತ ಪ್ರದೇಶಗಳಿಂದ ವಾಹನ ಸಂಚಾರ ನಿಯಂತ್ರಿಸುವುದು ಮತ್ತು ಸಾಧ್ಯವಾದರೆ ನಿಲ್ಲಿಸುವುದು ಸೂಕ್ತ ಎಂದರು.
ಆಫ್ರಿಕನ್ ಹಂದಿ ಜ್ವರವು ಹಂದಿ ಅಥವಾ ಹಂದಿಮಾಂಸದ ಸೇವನೆಯ ಮೂಲಕ ಮನುಷ್ಯನಿಗೆ ಹರಡುವುದಿಲ್ಲ ಹಾಗೂ ಮಾನವರಲ್ಲಿ ಈ ವೈರಾಣು ಯಾವುದೇ ರೋಗವನ್ನುಂಟು ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಹಂದಿಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿಪಾಲಕರು ಮುಂಜಾಗ್ರತೆಯಾಗಿ ಜೈವಿಕ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕೆಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ತಿಳಿಸಿದರು.