ಮಹಿಳೆ ಪತಿಯ ಮನೆಯಲ್ಲಿ ಮನೆಗೆಲಸ ಮಾಡಲು ಇಚ್ಛಿಸದಿದ್ದರೆ ಅದನ್ನು ಮದುವೆಗೆ ಮುನ್ನ ಹೇಳಬೇಕು: ಬಾಂಬೆ ಹೈಕೋರ್ಟ್

ಮುಂಬೈ,ಅ.27: ಮಹಿಳೆಯು ಮನೆಗೆಲಸ ಮಾಡಲು ಬಯಸುವುದಿಲ್ಲವಾದರೆ ಅದನ್ನು ಮದುವೆಗೆ ಮೊದಲೇ ತಿಳಿಸಬೇಕು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಇತ್ತೀಚಿನ ತೀರ್ಪೊಂದರಲ್ಲಿ ಅಭಿಪ್ರಾಯಿಸಿದೆ.
ತನ್ನ ಪತಿ ಮತ್ತು ಅತ್ತೆ-ಮಾವ ತನ್ನ ಮೇಲೆ ಕ್ರೌರ್ಯವೆಸಗುತ್ತಿದ್ದಾರೆ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವಳು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದ ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮನೆಗೆಲಸ ಮಾಡುವಂತೆ ವಿವಾಹಿತೆಗೆ ಸೂಚಿಸುವುದು ದೂರುದಾರ ಮಹಿಳೆ ತಿಳಿಸಿರುವಂತೆ ಕ್ರೌರ್ಯವಾಗುವುದಿಲ್ಲ ಮತ್ತು ಆಕೆಯನ್ನು ಮನೆಗೆಲಸದ ಆಳು ಎಂದು ಪರಿಗಣಿಸಿದಂತಾಗುವುದಿಲ್ಲ ಎಂದು ನ್ಯಾಯಾಲಯವು ಎತ್ತಿಹಿಡಿದಿದೆ.
ಮನೆಗೆಲಸ ಮಾಡಲು ಮಹಿಳೆಗೆ ಇಷ್ಟವಿಲ್ಲದಿದ್ದರೆ ವರ ತನ್ನ ಮದುವೆಯ ಬಗ್ಗೆ ಮರುಚಿಂತನೆ ನಡೆಸುವಂತಾಗಲು ಆಕೆ ಅದನ್ನು ಮದುವೆಗೆ ಮುನ್ನವೇ ತಿಳಿಸಬೇಕು ಅಥವಾ ಮದುವೆಯ ಬಳಿಕ ತಿಳಿಸಿದ್ದರೆ ಇಂತಹ ಸಮಸ್ಯೆಯನ್ನು ಆರಂಭದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ ಎಸ್. ಪಾಟೀಲ್ ಅವರ ಪೀಠವು ತಿಳಿಸಿತು.
ಮದುವೆಯಾದ ಒಂದು ತಿಂಗಳ ಬಳಿಕ ಕಾರು ಖರೀದಿಗೆ ನಾಲ್ಕು ಲ.ರೂ.ತರುವಂತೆ ಪತಿ ಮತ್ತು ಅತ್ತೆ-ಮಾವ ಆಗ್ರಹಿಸಿದ್ದರು. ತನ್ನ ತಂದೆಗೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಪತಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಳು.
‘ಮಾನಸಿಕ ಮತ್ತು ದೈಹಿಕ ಕಿರುಕುಳ ’ಶಬ್ದಗಳನ್ನು ಬಳಸಿದ ಮಾತ್ರಕ್ಕೆ ಐಪಿಸಿಯ ಕಲಂ 498ರಡಿ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಧರಿಸುವುದು ಸಾಧ್ಯವಿಲ್ಲ. ಕಿರುಕುಳದ ಅಂತಹ ಕೃತ್ಯಗಳನ್ನು ಬಣ್ಣಿಸದಿದ್ದರೆ ಅವು ಕಿರುಕುಳ ಅಥವಾ ಕ್ರೌಯಕ್ಕೆ ಸಮನಾದ ಕೃತ್ಯಗಳು ಎಂದು ನಿರ್ಧರಿಸಲಾಗುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.







