ಉತ್ತರಪ್ರದೇಶ: 50 ಸಾವಿರ ರೂ. ಸಾಲ ಕೊಟ್ಟಾತನಿಂದ ಕಿರುಕುಳ, ವ್ಯಕ್ತಿ ಆತ್ಮಹತ್ಯೆ
![ಉತ್ತರಪ್ರದೇಶ: 50 ಸಾವಿರ ರೂ. ಸಾಲ ಕೊಟ್ಟಾತನಿಂದ ಕಿರುಕುಳ, ವ್ಯಕ್ತಿ ಆತ್ಮಹತ್ಯೆ ಉತ್ತರಪ್ರದೇಶ: 50 ಸಾವಿರ ರೂ. ಸಾಲ ಕೊಟ್ಟಾತನಿಂದ ಕಿರುಕುಳ, ವ್ಯಕ್ತಿ ಆತ್ಮಹತ್ಯೆ](https://www.varthabharati.in/sites/default/files/images/articles/2022/10/28/354435-1666947182.jpg)
ಭದೋಹಿ(ಉತ್ತರ ಪ್ರದೇಶ): 50,000 ರೂ. ಸಾಲ ಪಡೆದಾತನಿಂದ ಕಿರುಕುಳ ಅನುಭವಿಸಿದ ನಂತರ 48 ವಯಸ್ಸಿನ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಭದೋಹಿಯಲ್ಲಿ ಬಾಡಿಗೆ ವಸತಿಗೃಹವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಚಿತ್ರಕೂಟ ಜಿಲ್ಲೆಯವರಾದ ದಶರಥ್ ಸಿಂಗ್ ಅವರು ತಮ್ಮ ಪತ್ನಿ ದುರ್ಗಾದೇವಿ ಹಾಗೂ 12 ವರ್ಷದ ಮಗನೊಂದಿಗೆ ಉತ್ತರಪ್ರದೇಶದ ಭದೋಹಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಈ ಪ್ರದೇಶದಲ್ಲಿ ಸ್ಟ್ರೀಟ್ ಫುಡ್ ಕಿಯೋಸ್ಕ್ ನಡೆಸುತ್ತಿದ್ದರು ಎಂದು ಗೋಪಿಗಂಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಯಾ ಪ್ರಸಾದ್ ಶುಕ್ಲಾ ಅವರು ಪಿಟಿಐಗೆ ತಿಳಿಸಿದ್ದಾರೆ.
ದಶರಥ್ ಸಿಂಗ್ ಅವರು ಮಿರ್ಝಾಪುರದ ಸಾಲದಾತನಿಂದ 50,000 ರೂ. ಸಾಲ ತೆಗೆದುಕೊಂಡಿದ್ದಾರೆ ಮತ್ತು ನಿಯಮಿತವಾಗಿ ಬಡ್ಡಿಯನ್ನು ಪಾವತಿಸುತ್ತಿದ್ದರು ಎಂದು ದುರ್ಗಾದೇವಿ ಹೇಳಿದರು. ಆದಾಗ್ಯೂ, ಅನಿರ್ದಿಷ್ಟ ಕಾರಣಗಳಿಂದಾಗಿ ಅವರು ಇತ್ತೀಚೆಗೆ ಕೆಲವು ಕಂತುಗಳನ್ನು ಕಟ್ಟಿಲ್ಲ. ಸಾಲ ನೀಡಿದಾತನು ಬೆದರಿಕೆ ಹಾಕಲು ಆರಂಭಿಸಿದನು ಎಂದು ಗಯಾ ಪ್ರಸಾದ್ ಶುಕ್ಲಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಸಾಲದಾತ ಗುರುವಾರ ಸಾಲ ಮರುಪಾವತಿ ಮಾಡಲು ಗಡುವು ನೀಡಿದ್ದ. ಈ ಹಿನ್ನೆಲೆಯಲ್ಲಿ ದುರ್ಗಾದೇವಿ ಬ್ಯಾಂಕ್ಗೆ ತೆರಳಿದ್ದು, ಬ್ಯಾಂಕ್ ಮುಚ್ಚಿರುವುದು ಕಂಡು ಬಂದಿದೆ. ನಂತರ ಆಕೆ ಹಾಗೂ ಆಕೆಯ ಮಗ ಹಣವನ್ನು ಹೊಂದಿಸಲು ನೆರೆ ಮನೆಗೆ ಹೋದರು. ಅವರು ಹಿಂದಿರುಗಿದಾಗ ದಶರಥ್ ಸಿಂಗ್ ಮೃತಪಟ್ಟಸ್ಥಿತಿಯಲ್ಲಿರುವುದು ಕಂಡು ಬಂದಿದೆ ಎಂದು ಶುಕ್ಲಾ ಹೇಳಿದರು.