ಪಾವಗಡ: ಸೊಲಾರ್ ಪಾರ್ಕ್ನಲ್ಲಿ ವಿದ್ಯುತ್ ತಗುಲಿ ಯುವಕ ಮೃತ್ಯು
ಪಾವಗಡ: ತಾಲೂಕಿನ ತಿರುಮಣಿ ಹೋಬಳಿಯ ಕ್ಯಾತಗಾನಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್ ನ ಅವಾದ್ ಪ್ಲಾಂಟ್ ನಲ್ಲಿ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತಾಲೂಕಿನ ಚಿಕ್ಕಹಳ್ಳಿ ಗ್ರಾಮದ ಗೋಪಾಲ್ (22) ಮೃತ ಯುವಕನಾಗಿದ್ದು, ಈತ ತಂತ್ರಜ್ಞನಾಗಿ ಸೋಲಾರ್ ಪ್ಲಾಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಪ್ಲಾಂಟ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಗ್ರಾಮದ ಕೆರೆ ತುಂಬಿ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿತ್ತು. ಅಧಿಕಾರಿಗಳು ಪರಿಹಾರ ಕೊಡಿಸುವುದಾಗಿ ರೈತರ ಮನವೊಲಿಸಿ ಕೆರೆ ನೀರು ಹೊರ ಬಿಡಿಸಿದ್ದರೆಂದು ಹೇಳಲಾಗಿದೆ.
ಸಾರ್ವಜನಿಕರ ಆಕ್ರೋಶ: 'ಕಂಪೆನಿಗಳ ಉಳಿತಾಯಕ್ಕಾಗಿ ಯುವಕರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಖಾಸಗಿ ಕಂಪೆನಿಗಳ ಮೇಲೆ ಕ್ರಮ ಜರುಗಿಸಿ ಹಾಗೂ ಕೆ ಎಸ್ ಪಿ ಟಿ ಸಿ ಸೆಲ್ ಸಂಸ್ಥೆಯು ಸಹ ಇಲ್ಲಿನ ಜನತೆಗೆ ಹಾಗೂ ಕಂಪನಿಗಳಿಗೆ ಕೆಲಸ ಮಾಡುವ ವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ಒತ್ತು ನೀಡಬೇಕು' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.