ಮುಂದಿನ ಚುನಾವಣೆಯಲ್ಲಿ 'ಹುಲಿಯಾ' ಕಾಡಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್
![ಮುಂದಿನ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್ ಮುಂದಿನ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್](https://www.varthabharati.in/sites/default/files/images/articles/2022/10/29/354590-1667060402.jpg)
ಮೈಸೂರು,ಅ.29: 'ವೀರಪ್ಪನ್ ಕಾಡಿನಲ್ಲಿ ಹೇಗೆ ನರಹಂತಕನಾಗಿ ಮೆರೆದನೊ ಅದೇ ರೀತಿ ಸಿದ್ದರಾಮಯ್ಯ ರಾಜ್ಯದಲ್ಲಿ ನರಹಂತಕ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು' ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೃಷ್ಣರಾಜ ಕ್ಷೇತ್ರದ ವಿದ್ಯಾರಣ್ಯ ಪುರಂನ ಭೂತಾಳೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಜನ ಸಂಕಲ್ಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ದಲಿತರು ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರಕ್ಕೆ ಕಳುಹಿಸಿದರು. ಪರಮೇಶ್ವರ್ ಅವರನ್ನು ಸಂಚಿನ ಮೂಲಕ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ ನನಗೆ ತೊಡಕಾಗಲಿದ್ದಾರೆ ಎಂದು ಲೋಕಸಭಾ ಚುನಾವಣೆಯಲ್ಲೂ ಅವರನ್ನು ಸೋಲಿಸುವ ಕೆಲಸವನ್ನು ಸಿದ್ಧರಾಮಯ್ಯ ಮಾಡಿದರು. ಆದರೆ ಮಲ್ಲಿಕಾರ್ಜುನ ಖರ್ಗೆ ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ಸಿದ್ಧರಾಮಯ್ಯ ಅವರಿಗೆ ಭಯ ಶುರುವಾಗಿದೆ. ಆದ್ದರಿಂದ ಮುಂದಿನ ಚುನಾವಣೆಗೆ ಹುಲಿಯಾ ಕಾಡಿಗೆ ಹೋಗುತ್ತಾರೆ' ಎಂದು ಲೇವಡಿ ಮಾಡಿದರು.
''ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ 40% ಸರ್ಕಾರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇವರ ಕಾಲದಲ್ಲಿ ಏನು ಮಾಡಿದರು. ಶಾಲಾ ಮಕ್ಕಳಿಗೆ ನೀಡುವ ಸೈಕಲ್, ಮೊಟ್ಟೆ, ರೈತರಿಗೆ ನೀಡುವ ಸವತ್ತುಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭ್ರಷ್ಟಾಚಾರ ನಡೆಸಿದರು. ಅರ್ಕಾವತಿ ಡಿ ನೋಟಿಫಿಕೇಷನ್ನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದರು. ಸಿದ್ದರಾಮಯ್ಯ ಮುಂದೆ ಎಲ್ಲಿ ಇರಲಿದ್ದಾರೆ ಎಂದು ಮುಂದೆ ಗೊತ್ತಾಗುತ್ತದೆ' ಎಂದು ಹೇಳಿದರು.
ಇದನ್ನೂ ಓದಿ: ಯುವ ಸಮೂಹದ ಸಹನೆ ಕೆಣಕುತ್ತಿರುವ ಕೇಂದ್ರ ಸರಕಾರ: ಸಿದ್ದರಾಮಯ್ಯ ಕಿಡಿ