ಮೂಡಿಗೆರೆ: ಹೃದಯಾಘಾತದಿಂದ ಶಾಲಾ ಬಾಲಕಿ ಮೃತ್ಯು
ಅಗಲುವಿಕೆಯ ನೋವಲ್ಲೂ ಮಗಳ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಹೆತ್ತವರು
![ಮೂಡಿಗೆರೆ: ಹೃದಯಾಘಾತದಿಂದ ಶಾಲಾ ಬಾಲಕಿ ಮೃತ್ಯು ಮೂಡಿಗೆರೆ: ಹೃದಯಾಘಾತದಿಂದ ಶಾಲಾ ಬಾಲಕಿ ಮೃತ್ಯು](https://www.varthabharati.in/sites/default/files/images/articles/2022/10/30/354650-1667113694.gif)
ಚಿಕ್ಕಮಗಳೂರು, ಅ.30: ಹೃದಯಾಘಾತಕ್ಕೊಳಗಾಗಿ ಪ್ರೌಢಶಾಲಾ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮೂಡಿಗೆರೆ ಪಟ್ಟಣದಲ್ಲಿ ಶನಿವಾರ ಮುಸ್ಸಂಜೆ ವೇಳೆ ನಡೆದಿದೆ.
ಮೂಲತಃ ಮಹಾರಾಷ್ಟ್ರದ, ಪ್ರಸಕ್ತ ಮೂಡಿಗೆರೆ ಪಟ್ಟಣದಲ್ಲಿ ಆಭರಣ ದುರಸ್ತಿ ಅಂಗಡಿ ನಡೆಸುತ್ತಿದ್ದ ಸಂತೋಷ್ ಎಂಬವರ ಪುತ್ರಿ ವೈಷ್ಣವಿ(14) ಮೃತ ಬಾಲಕಿ. ಅಗಲುವಿಕೆಯ ನೋವಿನ ಮಧ್ಯೆಯೂ ಪೋಷಕರು ವೈಷ್ಣವಿಯ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಡಿಗೆರೆಯ ಬೆಥನಿ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ವೈಷ್ಣವಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೆತ್ತವರು ಆಕೆಯ ನೇತ್ರ ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಆಸ್ಪತ್ರೆ ವೈದ್ಯರು ನೇತ್ರದಾನ ಪ್ರಕ್ರಿಯೆ ನೆರವೇರಿಸಿದರು.
ಗುರುವಾರ(ಅ.27) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲೂ ಅನುಶ್ರೀ ಎಂಬ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಳು. 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅನುಶ್ರೀಯ ನೇತ್ರದಾನ ಮಾಡುವ ಮೂಲಕ ಆಕೆಯ ಹೆತ್ತವರು ಸಾರ್ಥಕತೆ ಮೆರೆದಿದ್ದರು.