ಎಚ್.ಡಿ. ಕುಮಾರಸ್ವಾಮಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ
ಕೋಲಾರ, ಅ.31: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ. ಕೆ. ವೆಂಕಟಶಿವಾರೆಡ್ಡಿ ಮನವಿ ಮಾಡಿದ್ದಾರೆ.
ಸೋಮವಾರ ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕೋಲಾರಕ್ಕೆ ಬಂದು ಸ್ಪರ್ಧಿಸಿ ಗೆದ್ದು, ಮುಖ್ಯಮಂತ್ರಿ ಆಗುತ್ತಾರೆ. ಇದು ಜಿಲ್ಲೆ ಪಾಲಿಗೆ ಒಳ್ಳೆಯ ವಿಚಾರ. ಈ ಬಗ್ಗೆ ಮನವಿ ಮಾಡುತ್ತೇವೆ. ಈ ಮೂಲಕ ಜಿಲ್ಲೆ ಅಭಿವೃದ್ಧಿ ಆಗಲಿದೆ ಎಂದರು.
ನ.1ರಿಂದ 5ರವರಗೆ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ. ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆ ಆರಂಭವಾಗಲಿದ್ದು ನವೆಂಬರ್ 2ಕ್ಕೆ ಬಂಗಾರಪೇಟೆ, 3 ಮಾಲೂರು, 4 ಕೋಲಾರ, 5 ಶ್ರೀನಿವಾಸಪುರದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಜೆಡಿಎಸ್ನ ಹಬ್ಬವಿದು. ಅಂಥ ವಾತಾವರಣ ಕಲ್ಪಿಸಬೇಕು. ರಾಜ್ಯೋತ್ಸವ ಅಂಗವಾಗಿ ಮನೆಮನೆಯಲ್ಲಿ ಕನ್ನಡ ಬಾವುಟ ಹಾರಿಸಬೇಕು. ಇದನ್ನು ಕಾರ್ಯಕರ್ತರು ಪಾಲಿಸಬೇಕುಎಂದು ಕರೆ ನೀಡಿದರು.
ಪ್ರತಿ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಇರಲಿದೆ. ಮುಳಬಾಗಿಲಿನ ಬಟ್ಲಹಳ್ಳಿ, ಬಂಗಾರಪೇಟೆಯ ಮಾಗೇರಿ, ಮಾಲೂರಿನ ಶಿವಾರಪಟ್ಟಣ, ಶ್ರೀನಿವಾಸಪುರದ ಗೌನಪಲ್ಲಿ, ಕೋಲಾರದ ಕ್ಯಾಲನೂರಿನಲ್ಲಿ ಗ್ರಾಮ ವಾಸ್ತವ್ಯ ಇರಲಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ, ಯರಗೋಳ್ ಕುಡಿಯುವ ನೀರಿನ ಯೋಜನೆಗೆ ಚಾಲನೆ, ರೈತರಿಗೆ ಸಾಲಮನ್ನಾ ಮಾಡಿದ್ದಾರೆ ಕುಮಾರಸ್ವಾಮಿ ನೀಡಿದ ಈ ಕೊಡುಗೆಗಾಗಿ ಕೋಲಾರದ ಜನ ಎಚ್ ಡಿಕೆಗೆ ಮತ ನೀಡಬೇಕು ಎಂದರು.