ಮಣಿಪಾಲ: ವಿಶ್ವ ಪಾರ್ಶ್ವವಾಯು ಜಾಗೃತಿ ದಿನದ ಕಲಾಕೃತಿ ಪ್ರದರ್ಶನ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ವಿಶ್ವ ಪಾರ್ಶ್ವವಾಯು ಜಾಗೃತಿ ದಿನದ ಅಂಗವಾಗಿ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಕಲಾಕೃತಿಯನ್ನು ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್ ಕೆಎಂಸಿ ಆವರಣದಲ್ಲಿ ಇಂದು ಅನಾವರಣಗೊಳಿಸಿದರು.
ಕಲಾಕೃತಿಯಲ್ಲಿ ಪಾರ್ಶ್ವವಾಯುಗೆ ಕಾರಣವಾಗುವ ಅಪಾಯಕಾರಿ ಅಂಶಗಳ ಬಗ್ಗೆ ಮತ್ತು ಅವುಗಳನ್ನು ಯಾವ ರೀತಿಯ ಜೀವನ ಶೈಲಿಯಿಂದ ತಡೆಗಟ್ಟಬಹುದು ಎಂಬುದನ್ನು ವಿವರವಾಗಿ ಬಿಂಬಿಸಲಾಗಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಸ್ತೂರ್ಬಾ ಆಸ್ಪತ್ರೆಯ ವೈಧ್ಯಕೀಯ ಅಧಿಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಅಧುನಿಕ ತಲೆಮಾರಿನ ಜನರ ಬದಲಾಗಬೇಕಾದ ಜೀವನಶೈಲಿ ಬಗ್ಗೆ ಒತ್ತಿ ಹೇಳಿದರು. ಈ ಕಲಾಕೃತಿಯನ್ನು ಜನಸಾಮಾನ್ಯರಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಲಾಗಿದೆ ಎಂದರು.
ಜನರ ಮಾನಸಿಕ ಒತ್ತಡ, ರಕ್ತದೊತ್ತಡದ ನಿಯಂತ್ರಣದ ಅಗತ್ಯತೆ ಬಗ್ಗೆ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ವಿವರಿಸಿದರು. ವಿಭಾಗದ ಪ್ರಾಧ್ಯಾಪಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಲಾಕೃತಿಯನ್ನು ಒಂದು ವಾರಗಳ ಕಾಲ ಕೆಎಂಸಿ ಆವರಣದಲ್ಲಿ ಪ್ರದರ್ಶನಕ್ಕಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





