ಶೋಧ ವೇಳೆ ಪೊಲೀಸರು ವಕೀಲರನ್ನು ದೂಡಿ, ಪ್ರತಿಗಳನ್ನು ನೀಡದೆ ಹಾರ್ಡ್ ಡ್ರೈವ್ ಕೊಂಡೊಯ್ದಿದ್ದಾರೆ: ದಿ ವೈರ್ ಆರೋಪ
![ಶೋಧ ವೇಳೆ ಪೊಲೀಸರು ವಕೀಲರನ್ನು ದೂಡಿ, ಪ್ರತಿಗಳನ್ನು ನೀಡದೆ ಹಾರ್ಡ್ ಡ್ರೈವ್ ಕೊಂಡೊಯ್ದಿದ್ದಾರೆ: ದಿ ವೈರ್ ಆರೋಪ ಶೋಧ ವೇಳೆ ಪೊಲೀಸರು ವಕೀಲರನ್ನು ದೂಡಿ, ಪ್ರತಿಗಳನ್ನು ನೀಡದೆ ಹಾರ್ಡ್ ಡ್ರೈವ್ ಕೊಂಡೊಯ್ದಿದ್ದಾರೆ: ದಿ ವೈರ್ ಆರೋಪ](https://www.varthabharati.in/sites/default/files/images/articles/2022/11/1/354861-1667293048.jpeg)
ಹೊಸದಿಲ್ಲಿ: ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ದಾಖಲಿಸಿರುವ ದೂರಿನ ಆಧಾರದಲ್ಲಿ ದಿ ವೈರ್ ಮಾಧ್ಯಮ ಸಂಸ್ಥೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದ ದಿಲ್ಲಿ ಪೊಲೀಸರು ಸೋಮವಾರ ಸಂಸ್ಥೆಯ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಸಂಸ್ಥೆಯ ವಕೀಲರೊಬ್ಬರನ್ನು ದೂಡಿದ್ದೇ ಅಲ್ಲದೆ ಕಚೇರಿಯಿಂದ ಕೆಲ ಹಾರ್ಡ್ ಡ್ರೈವ್ಗಳನ್ನು ಅವುಗಳ ಕ್ಲೋನ್ಡ್ ಪ್ರತಿಗಳನ್ನು ಒದಗಿಸದೆಯೇ ಕೊಂಡೊಯ್ದಿದ್ದಾರೆ ಎಂದು ದಿ ವೈರ್ ಆರೋಪಿಸಿದೆ.
ಸೋಮವಾರ ಸಿದ್ಧಾರ್ಥ ವರದರಾಜನ್ ಸಹಿತ ದಿ ವೈರ್ನ ಒಟ್ಟು ನಾಲ್ಕು ಸಂಪಾದಕರು- ಎಂ ಕೆ ವೇಣು, ಸಿದ್ಧಾರ್ಥ್ ಭಾಟಿಯಾ ಮತ್ತು ಜಾಹ್ನವಿ ಸೇನ್ ಅವರ ನಿವಾಸಗಳಲ್ಲಿ ಶೋಧ ನಡೆಸಲಾಗಿತ್ತು. ವಂಚನೆ, ಫೋರ್ಜರಿ, ಮಾನಹಾನಿ ಮತ್ತು ಕ್ರಿಮಿನಲ್ ಸಂಚು ಆರೋಪವನ್ನು ದಿ ವೈರ್ ಎದುರಿಸುತ್ತಿದೆ. ¸ಂಸ್ಥೆಯ ಹೆಡ್ ಆಫ್ ಪ್ರಾಡಕ್ಟ್ ಮಿಥುನ್ ಕಿಡಂಬಿ ಅವರ ನಿವಾಸದಲ್ಲೂ ಶೋಧ ನಡೆದಿದೆ.
ಶೋಧದ ವೇಳೆ ಕಚೇರಿಯಿಂದ ಸಂಸ್ಥೆಯ ಸಿಬ್ಬಂದಿಗಳು ಬಳಸುತ್ತಿದ್ದ ಎರಡು ಕಂಪ್ಯೂಟರ್ಗಳಲ್ಲಿದ್ದ ಹಾರ್ಡ್ ಡ್ರೈವ್ಗಳನ್ನು ಸಂಸ್ಥೆಯ ಸಾಮಾನ್ಯ ಕೆಲಸ ಕಾರ್ಯಗಳು ಯಾವುದೇ ಅಡಚಣೆಯಿಲ್ಲದಂತೆ ನಡೆಯುವಂತಾಗಲು ಅನುವು ಮಾಡಿ ಕೊಡುವ ಅವುಗಳ ಹ್ಯಾಶ್ ವ್ಯಾಲ್ಯೂ ಅಥವಾ ಕ್ಲೋನ್ಡ್ ಪ್ರತಿ ಒದಗಿಸದೆ ತೆಗೆದುಕೊಂಡು ಹೋಗಿದ್ದಾರೆ ಎಂದು ದಿ ವೈರ್ ಆರೋಪಿಸಿದೆ.
ಸಂಪಾದಕರು ಪೊಲೀಸರ ಜೊತೆ ಸಂಪೂರ್ಣವಾಗಿ ಸಹಕರಿಸಿ ಅವರು ಕೇಳಿದ ಸಾಧನಗಳನ್ನು ಒದಗಿಸಿದ್ದಾರೆ ಎಂದು ಸಂಸ್ಥೆ ಹೇಳಿದೆಯಲ್ಲದೆ ವಶಪಡಿಸಿಕೊಳ್ಳಲಾದ ಫೋನ್ಗಳ, ಕಂಪ್ಯೂಟರ್ಗಳ ಮತ್ತು ಐಪ್ಯಾಡ್ಗಳ ಹ್ಯಾಶ್ ವ್ಯಾಲ್ಯೂ ಮತ್ತು ಸಾಧನಗಳ ಕ್ಲೋನ್ಡ್ ಪ್ರತಿಗಳಿಗೆ ಕೋರಲಾಗಿತ್ತು ಎಂದೂ ತಿಳಿಸಿದೆ
ವಿವಾದಕ್ಕೀಡಾಗಿರುವ ಮೆಟಾ ಸಂಬಂಧಿತ ಲೇಖನಗಳಿಗಾಗಿ ಕೆಲಸ ಮಾಡಿದ್ದ ಸಂಶೋಧಕ ದೇವೇಶ್ ಕುಮಾರ್ ಅವರ ವಿರುದ್ಧ ದಿ ವೈರ್ ಈಗಾಗಲೇ ಪೊಲೀಸ್ ದೂರು ದಾಖಲಿಸಿದ್ದು ದಿ ವೈರ್ ಮತ್ತದರ ಘನತೆಗೆ ಕುಂದುಂಟು ಮಾಡುವ ಉದ್ದೇಶದಿಂದ ತಿರುಚಲಾದ ದಾಖಲೆಗಳು, ಇಮೇಲ್ಗಳು ಮತ್ತು ವೀಡಿಯೋಗಳನ್ನು ಒದಗಿಸಿದ್ದರು ಎಂದು ಆರೋಪಿಸಿದೆ.