ಕನ್ನಡ ರಾಜ್ಯೋತ್ಸವ; KRS ಪಕ್ಷದಿಂದ ಕನ್ನಡೋತ್ಸವ ಯಾತ್ರೆ ಆರಂಭ

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (KRS) ಇಂದು (ಮಂಗಳವಾರ) 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿತು.
ಇದೇ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಮತ್ತು ಕಾರ್ಮಿಕರ ಘಟಕವನ್ನು ಹಾಗೂ ಅದರ ಕಚೇರಿಯ ಉದ್ಘಾಟನೆಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಕೃಷ್ಣಾರೆಡ್ಡಿ ಅವರು "ಕನ್ನಡವು ನಮ್ಮ ಬದುಕಿನ ಹಾಗೂ ಜೀವನೋಪಾಯದ ಭಾಷೆಯಾಗಬೇಕು, ಅದಕ್ಕೆ ನಮಗೆ ವಿಫುಲ ಅವಕಾಶಗಳಿವೆ, ನಾವು ಈ ನಿಟ್ಟಿನಲ್ಲಿ ಬಹಳಷ್ಟು ಶ್ರಮ ಹಾಕಬೇಕು ಮತ್ತು ಅದು ನಿರಂತರವಾಗಿರಬೇಕು. ಕೇವಲ ಅಭಿಮಾನ ಮಾತ್ರ ಸಾಲುವುದಿಲ್ಲ, ತಂತ್ರಜ್ಞಾನ ನಮಗೆ ಕನ್ನಡವನ್ನು ಆಡಳಿತದ ಎಲ್ಲಾ ಹಂತದಲ್ಲೂ ಬಳಸುವ ಅವಕಾಶವನ್ನು ನೀಡಿದೆ, ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳದಿದ್ದರೆ, ಕನ್ನಡದ ಸ್ಥಾನವನ್ನು ಮತ್ತೊಂದು ಭಾಷೆ ಆಕ್ರಮಿಸುತ್ತದೆ. ಕನ್ನಡ ನಾಡಿನ, ಕನ್ನಡವನ್ನು ಕಟ್ಟುವುದು ಎಂದರೆ, ಕೇವಲ ಭಾಷೆಯನ್ನು ಬಳಸುವುದು, ಉಳಿಸುವುದು ಮಾತ್ರವಲ್ಲ, ಅದು ನಾಡಿನ ಜನರನ್ನು ಭ್ರಷ್ಟಾಚಾರ, ದುರಾಡಳಿತ, ಅವರ ಮೇಲಾಗುತ್ತಿರುವ ಅಕ್ರಮ, ಅನ್ಯಾಯ, ದೌರ್ಜನ್ಯಗಳಿಂದ ರಕ್ಷಿಸುವುದು, ನಾಡಿನ ನೆಲ, ಜಲ, ಅರಣ್ಯ ರಕ್ಷಿಸುವುದು, ಕಾಪಾಡುವುದು, ಜನರ ಆರೋಗ್ಯ ಹಾಗೂ ಶಿಕ್ಷಣ ಉತ್ತಮಪಡಿಸುವುದು ಕೂಡ ಮಹತ್ತರವಾದ ಕೆಲಸ, ಆ ನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷ ಕೆಲಸ ಮಾಡುತ್ತಿದೆ'' ಎಂದು ತಿಳಿಸಿದರು.
''ಇಂದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತಹ ಕೆಲಸಗಳು ನಡೆಯುತ್ತಿದ್ದು, ಇದಕ್ಕೆ ಒಕ್ಕೂಟ ಸರ್ಕಾರ ಮುಂಚೂಣಿಯಲ್ಲಿ ಇರುವುದು ದುರದೃಷ್ಟಕರ. ಹಾಗೆಯೇ, ಕನ್ನಡ ಕಟ್ಟುವ, ಉಳಿಸುವ, ಸಲಹುವ ಸಂಸ್ಥೆಗಳನ್ನೂ ಕೂಡ ಭ್ರಷ್ಟಗೊಳಿಸಿ ಕನ್ನಡ ವಿರೋಧಿ ನಡೆಯನ್ನು ಇತ್ತೀಚಿನ ಸರ್ಕಾರಗಳು ಮಾಡುತ್ತಿವೆ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಹೊರ ರಾಜ್ಯದ ಹಣವಂತರು ಅಕ್ರಮ ಮತ್ತು ವಾಮ ಮಾರ್ಗದಿಂದ ಹೆಚ್ಚಿನ ಲಾಭ ಗಳಿಸಿ, ಲೂಟಿ ಮಾಡಿ, ಸ್ಥಳೀಯರ ಬದುಕು ದುಸ್ತರವಾಗಿದೆ. ರಾಜ್ಯದಲ್ಲಿ ನ್ಯಾಯ ನೀತಿ ಬೆಳೆಸಿದಾಗ ಮಾತ್ರ ಕನ್ನಡಿಗರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯ, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಕೆ ಆರ್ ಎಸ್ ಪಕ್ಷವಾಗಿದೆ. ಆದ್ದರಿಂದ ನಾಡಿನ ಜನರು ಕೆ ಆರ್ ಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ನ್ಯಾಯಯುತ ಮತ್ತು ದಕ್ಷ ಆಡಳಿತದ ಮೂಲಕ ಕರ್ನಾಟಕ, ಕನ್ನಡ ಮತ್ತು ಕನ್ನಡದ ಜನರು ವಿಶ್ವದಲ್ಲಿ ಪ್ರಮುಖ ಸ್ಥಾನ ಹೊಂದಲು ಸಾಧ್ಯ. ಇದೇ ನಿಟ್ಟಿನಲ್ಲಿ ಕನ್ನಡೋತ್ಸವ ಯಾತ್ರೆ ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ 13 ದಿನಗಳ ಕಾಲ ಸಂಚರಿಸಿ ರಾಜ್ಯದ ಪರಂಪರೆ, ಇತಿಹಾಸ ಹಾಗೂ ಕನ್ನಡ / ಕರ್ನಾಟಕದ ಏಲ್ಗೆಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ಕನ್ನಡ ಹೋರಾಟಗಾರರಾದ ಬಿ. ಕೆ. ಪ್ರಸನ್ನ ಮಾತನಾಡಿ, “ರಾಜ್ಯದಲ್ಲಿ ಇಂದು ಕರ್ನಾಟಕದ ನೆಲದಲ್ಲಿ ಉದ್ಯೋಗ ವಂಚಿತರಾಗಿ ನರಳುವ ಸಂದರ್ಭ ಬಂದಿದೆ. ಇದು ಬದಲಾಗಬೇಕಾಗಿದೆ, ಈ ಬಗ್ಗೆ ನಮ್ಮನ್ನು ಇದುವರಗೆ ನಮ್ಮಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಈ ವಿಚಾರಗಳ ಬಗ್ಗೆ ಯಾವುದೇ ರೆತಿಯಲ್ಲಿ ಕೆಲಸ ಮಾಡದಿರುವುದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೆಆರ್ಎಸ್ ಪಕ್ಷ ನಿರಂತರವಾಗಿ ಕೆಲಸ ಮಾಡಲಿದೆ,” ಎಂದು ತಿಳಿಸಿದರು.
ಕನ್ನಡೋತ್ಸವ ಯಾತ್ರೆಗೆ ಚಾಲನೆ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷವು ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕನ್ನಡೋತ್ಸವ ಯಾತ್ರೆಗೆ ಚಾಲನೆ ನೀಡಲಾಯಿತು. ಬೆಂಗಳೂರಿನಲ್ಲಿರುವ ಪಕ್ಷದ ಕೇಂದ್ರ ಕಛೇರಿಯ ಮುಂಭಾಗದಿಂದ ಕನ್ನಡೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಯಾತ್ರೆಯು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭವಾಗಿ ಬೀದರ್ ತನಕ ಸಂಚರಿಸಿ ದಿನಾಂಕ 13-11-2022 ರಂದು ಬೆಂಗಳೂರಿನ ಡಾ.ರಾಜ್ಕುಮಾರ್ ಅವರ ಸಮಾಧಿ ಬಳಿ ಮುಕ್ತಾಯವಾಗಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಾಕ್ಷರಾದ ಲಿಂಗೇಗೌಡ ಎಸ್. ಎಚ್.ಅವರು “ಕನ್ನಡೋತ್ಸವ ಯಾತ್ರೆಯ ಸಂದರ್ಭದಲ್ಲಿ ನಾಡಿನ ಜನರಿಗೆ ನಾಡಿನ ಹಿರಿಮೆಯನ್ನು ಪರಿಚಯಿಸಿ, ಆ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಲು ಜನರನ್ನು ಸಂಘಟಿಸುವ ಕೆಲಸವನ್ನು ಮಾಡಬೇಕು ಮತ್ತು ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ” ಎಂದು ಹೇಳಿದರು.
ಕನ್ನಡೋತ್ಸವ ಯಾತ್ರೆಯು ಇಂದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟ ತಲುಪಿ, ನಾಳೆ ಅಲ್ಲಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಇದೇ ವೇಳೆ ತಿಳಿಸಿದರು.







