ಸಿಇಟಿ ಕೌನ್ಸೆಲಿಂಗ್ ವಿಳಂಬದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ: ಯು.ಟಿ. ಖಾದರ್

ಮಂಗಳೂರು, ನ.2: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಸಿಇಟಿ ಕೌನ್ಸೆಲಿಂಗ್ ವಿಳಂಬದಿಂದಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪೋಷಕರು ಆತ್ಮಸ್ಥೈರ್ಯವನ್ನು ಕಳೆದು ಕೊಳ್ಳುವಂತಾಗಿದೆ ಎಂದು ಶಾಸಕ, ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿಟಿಇ ಕೌನ್ಸೆಲಿಂಗ್ ವಿಳಂಬವಾಗಿರುವ ಕಾರಣ ಪ್ಯಾರಾ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದರು.
ಡೀಮ್ಡ್ ಕಾಲೇಜುಗಳು ಸೇರಿದಂತೆ ಈಗಾಗಲೇ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳು ಮ್ಯಾನೇಜ್ಮೆಂಟ್ ಸೀಟ್ಗಳನ್ನು ಭರ್ತಿ ಮಾಡಿಕೊಂಡು ಕೆಲವೊಂದು ಕಾಲೇಜುಗಳು ಈಗಾಗಲೇ ತರಗತಿಗಳನ್ನು ಆರಂಭಿಸಿವೆ. ಆದರೆ ಕೌನ್ಸಿಲಿಂಗ್ ಮೂಲಕ ಪ್ರವೇಶ ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭವಿಷ್ಯದ ಬಗ್ಗೆ ಹತಾಶರಾಗಿದ್ದಾರೆ. ಕೆಲ ಪೋಷಕರಂತೂ ಸಾಲ ಮಾಡಿ ಮ್ಯಾನೇಜ್ಮೆಂಟ್ ಸೀಟ್ಗಳನ್ನು ಪಡೆಯುವ ಪರಿಸ್ಥಿತಿ ಎದುರಾಗಿದ್ದರೆ, ನೆರೆ ಹೊರೆಯ ರಾಜ್ಯಗಳ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳ ಮ್ಯಾನೇಜ್ಮೆಂಟ್ ಸೀಟುಗಳನ್ನು ಪಡೆದಿದ್ದಾರೆ. ಇದರಿಂದ ನಮ್ಮ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಅಸಹಾಯಕರಾಗುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸುವುದಾಗಿ ಅವರು ಹೇಳಿದರು.
ಪದವಿ, ಪಿಯುಸಿ ಫಲಿತಾಂಶ ಹಾಗೂ ಇತರ ಪೂರಕ ಪರೀಕ್ಷೆಗಳ ಫಲಿತಾಂಶ, ಕೌನ್ಸೆಲಿಂಗ್ ಸೂಕ್ತ ಸಮಯದಲ್ಲಿ ನಡೆಸಲು ಸರಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು.
ಟೋಲ್ ಬಗ್ಗೆ ನಳಿನ್ ಹೇಳಿಕೆ ಪಲಾಯನವಾದ
ಸುರತ್ಕಲ್ ಟೋಲ್ಗೇಟ್ ತೆರವುಗೊಳಿಸುವ ಕುರಿತಂತೆ ನಡೆಯುತ್ತಿರುವ ಜನಪರ ಹೋರಾಟದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪಲಾಯನವಾದ ಎಂದು ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಆಸ್ಕರ್ ಫೆರ್ನಾಂಡಿಸ್ ಕಾಲದಲ್ಲಿ ಸುಮ್ಮನಿದ್ದರು ಎಂದು ನಳಿನ್ ಹೇಳಿದ್ದಾರೆ. ಆ ಸಮಯದಲ್ಲಿ ಪಡುಬಿದ್ರೆ, ತಲಪಾಡಿ ಟೋಲ್ ಇತ್ತಾ ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
ಆಡಳಿತ ಪಕ್ಷದ ವೈಫಲ್ಯವನ್ನು ತೋರಿಸುವುದು ವಿಪಕ್ಷವಾಗಿ ನಮ್ಮ ಜವಾಬ್ದಾರಿ. ಕೇಂದ್ರದ ಸಾರಿಗೆ ಸಚಿವರೇ ಆ ಟೋಲ್ ತೆರವುಗೊಳಿಸಬೇಕೆಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅದು ಅನಧಿಕೃತ ತೆರವುಗೊಳಿಸಲಾಗುವುದು ಎಂದು ಹೇಳಲಾಗಿದೆ. ಇಷ್ಟಿದ್ದರೂ ಜನಸಾಮಾನ್ಯರು ಹೋರಾಟ ಮಾಡಿದಲೂ ಅದನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಕೇಂದ್ರ ಸಚಿವರು, ಹೋರಾಟಗಾರರು ಹಾಗೂ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಮಾತುಕತೆ ಮಾಡುವ ತಾಕತ್ತು ಸಂಸದರಿಗೆ ಇಲ್ಲವೇ ಎಂದು ಖಾದರ್ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರವನ್ನು ಬಹಿರಂಗ ಪಡಿಸುವುದಾಗಿ ಬಿಜೆಪಿ ನಾಯಕರ ಹೇಳಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಕಳೆದ ಎರಡು ವರ್ಷಗಳಿಂದ ಬಿಜೆಪಿಯವರು ಇದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಯಾವುದನ್ನೂ ಮಾಡುತ್ತಿಲ್ಲ ಎಂದು ಮೂದಲಿಸಿದರು.
ಈಗಾಗಲೇ ಸಿದ್ದರಾಮಯ್ಯನವರ ಅವಧಿಯಲ್ಲಿ ಒಂಭತ್ತು ಮಂದಿ ಶಿಕ್ಷಕರಿಗೆ ಪರೀಕ್ಷೆ ಬರೆಯದೆ ನೇಮಕಾತಿ ಆದೇಶವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ತನಿಖೆ ನಡೆಸಿದಾಗ ಅದರಲ್ಲಿ ಏಳು ಮಂದಿಯ ನೇಮಕಾತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಆಗಿದ್ದು ಎಂದು ಗೊತ್ತಾಗಿ ಆ ವಿಷಯವನ್ನೇ ಮುಚ್ಚಿ ಹಾಕಲಾಯಿತು. ಬಿಜೆಪಿಯವರು ಹೇಳುವುದೊಂದು ಮಾಡುವುದೊಂದು. ಕೆಂಪೇಗೌಡರ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ನಿಂದನೆ ಮಾಡುತ್ತಾರೆ. ಕಾರಣ ಅವರಿಗೆ ಕೆಂಪೇಗೌಡರ ಕೆಲಸ ಕಾರ್ಯಗಳ ಮಾಹಿತಿ ಇಲ್ಲದೇ ಇರುವುದು. ಅವರ ಬಗ್ಗೆ ಗೊತ್ತಿಲ್ಲ ಎನ್ನಲಾಗದೆ ಬೇರೆ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಾರೆ. ಇವರಿಗೆ ಮತ ನೀಡಿದವರು ಆಲೋಚಿಸಬೇಕಾಗಿದೆ ಎಂದು ಖಾದರ್ ಹೇಳಿದರು.
ಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಬಾಝಿಲ್ ಡಿಸೋಜಾ, ಪ್ರಕಾಶ್ ಕಾಪಿಕಾಡ್, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.