ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಸಾಹಿತಿ ಪ್ರೊ. ಭಗವಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಸಾಗರ: ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೃತಿ ರಚಿಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್ ಮಾಡಿ ಸಾಗರ ಕೋರ್ಟ್ ಆದೇಶ ಮಾಡಿದೆ.
ಸಾಹಿತಿ ಭಗವಾನ್ ಅವರು 'ರಾಮ ಮಂದಿರ ಏಕೆ ಬೇಡ?' ಕೃತಿ ರಚಿಸಿದ್ದರು. ಈ ಕೃತಿಯು ವಿವಾದತ್ಮಾಕವಾಗಿದೆ. ಬಹು ಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಾಗರ ತಾಲೂಕು ಇಕ್ಕೇರಿ ಗ್ರಾಮದ ಮಹಾಬಲೇಶ್ವರ್ ಎಂಬುವರು ಸಾಗರದ JMFC ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಪ್ರಕರಣದ ಕುರಿತು ದೀರ್ಘಕಾಲದ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ವಿರುದ್ಧ IPC ಸೆಕ್ಷನ್ 295(a) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿತ್ತು.
ಈ ಪ್ರಕರಣದ ವಿಚಾರಣೆಗೆ ಇಂದು ಭಗವಾನ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಮೈಸೂರು ಎಸ್ಪಿ ಅವರ ಮೂಲಕ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದರೂ ಸಹ ಇಂದು ಸಾಹಿತಿ ಭಗವಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಇದರಿಂದ ಸಾಗರದ JMFC ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ್ ಭಗಾಡೆ ಅವರು ಭಗವಾನ್ ಅವರ ಬಂಧನಕ್ಕೆ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.