ಕಾರವಾರ: ಈಜಲು ತೆರಳಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಗಳು
ವ್ಯಕ್ತಿಗಾಗಿ ಕಾಳಿ ನದಿಯಲ್ಲಿ ಹುಡುಕಾಟ
ಕಾರವಾರ,ನ.3: ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬನನ್ನು ಮೊಸಳೆಗಳು ಎಳೆದೊಯ್ದ ಘಟನೆ ನಡೆದಿರುವುದಾಗಿ ಇಂದು ಮುಂಜಾನೆ ವರದಿಯಾಗಿದೆ.
ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯನ್ನು ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬಾತ ಎಂದು ಗುರುತಿಸಲಾಗಿದೆ
ಈಜಲು ನದಿಗೆ ಇಳಿದಿದ್ದಾಗ ಮೊಸಳೆಗಳು ಎಳೆದೊಯ್ದಿವೆ ಎಂದು ಹೇಳಲಾಗಿದೆ. ಮೊಸಳೆ ಎಳೆದೊಯ್ಯುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವ್ಯಕ್ತಿಗಾಗಿ ಕಾಳಿ ನದಿಯಲ್ಲಿ ಹುಡುಕಾಟ ನಡೆದಿದೆ. ಸ್ಥಳೀಯರ ಮಾಹಿತಿಯಂತೆ ಈ ವ್ಯಕ್ತಿ ನದಿ ದಂಡೆಯ ಮೇಲೆ ಬಟ್ಟೆ ಹಾಗೂ ಚಪ್ಪಲಿ ತೆಗೆದಿಟ್ಟು ಸ್ನಾನಕ್ಕಾಗಿ ನದಿಗೆ ಇಳಿದಿದ್ದಾರೆ.
ಈ ಭಾಗದಲ್ಲಿ ಮೊಸಳೆ ಹೆಚ್ಚಿದೆ. ಹೀಗಾಗಿ ನೋಡಿದವರು ತಕ್ಷಣವೇ ಮೇಲೆ ಬರುವಂತೆ ಕೂಗಿ ಹೇಳಿದ್ದಾರೆ. ಆದರೆ ಇಳಿದ ಕೆಲವೇ ಹೊತ್ತಿನಲ್ಲಿ ಎರಡು ಮೊಸಳೆಗಳು ಅವರ ಮೇಲೆ ದಾಳಿ ನಡೆಸಿ ಎಳೆದೊಯ್ದಿವೆ ಎಂದು ಹೇಳಲಾಗಿದೆ.
ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.
ಸ್ಥಳೀಯರು ಜಮಾಯಿಸಿದ್ದಾರೆ ಹಾಗೂ ಸಹಕರಿಸುತ್ತಿದ್ದಾರೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.