ಇಂದಿರಾ ಕ್ಯಾಂಟಿನ್ಗೆ ಬೀಗ; ದುಡ್ಡಿಲ್ಲದೇ ಇದ್ದರೆ ಸರಕಾರಕ್ಕೆ ಬೀಗ ಹಾಕಿ ಹೊರಟುಬಿಡಿ ಎಂದ ಸಿದ್ದರಾಮಯ್ಯ
ಬೆಂಗಳೂರು, ನ. 3: ‘ಬಡಜನರ ಹೊಟ್ಟೆ ಮೇಲೆ ಯಾಕೆ ನಿಮ್ಮ ಕೆಂಗಣ್ಣು ಬಸವರಾಜ್ ಬೊಮ್ಮಾಯಿ? ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್ಗಳಿಗೆ ದುಡ್ಡು ನೀಡದೆ ಬೀಗ ಹಾಕುತ್ತಿದ್ದೀರಿ, ಖಜಾನೆಯಲ್ಲಿ ದುಡ್ಡಿಲ್ಲದೆ ಇದ್ದರೆ ಸರಕಾರಕ್ಕೆ ಬೀಗ ಹಾಕಿ ಹೊರಟುಬಿಡಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ಸರಕಾರ ತನ್ನ ಮೊದಲ ಬಜೆಟ್ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಿಸಿತ್ತು. ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ ಬಿಜೆಪಿ, ಇರುವ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚುತ್ತಿದೆ’ ಎಂದು ದೂರಿದ್ದಾರೆ.
‘ಬೆಲೆ ಏರಿಕೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಒಂದು ಊಟಕ್ಕೆ ಇಂದು 50-60 ರೂ. ನೀಡಬೇಕಾಗಿದೆ. ನಗರದ ಬಡವರು ಮತ್ತು ಬೇರೆ ಊರುಗಳಿಂದ ಬಂದವರಿಗೆ ಅಕ್ಷಯ ಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಿ ಅವರ ಶಾಪಕ್ಕೆ ಯಾಕೆ ತುತ್ತಾಗುತ್ತೀರಿ? ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
‘ನಮ್ಮ ಸರಕಾರ ಇಂದಿರಾ ಕ್ಯಾಂಟೀನ್ಗಾಗಿ 2017-18ರಲ್ಲಿ 100 ಕೋಟಿ ರೂ. ಮತ್ತು 2018-19ರಲ್ಲಿ 145 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ನೀಡಿತ್ತು. 2022-23ರ ಬಿಜೆಪಿ ಸರಕಾರ ಬಜೆಟ್ನಲ್ಲಿ ಹಣ ನೀಡದೆ ಖರ್ಚಿನ ಭಾರವನ್ನು ಬಿಬಿಎಂಪಿ ತಲೆ ಮೇಲೆ ಹೊರಿಸಿರುವುದೇ ಈಗಿನ ಹಣದ ಕೊರತೆಗೆ ಕಾರಣ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.
‘ಕ್ಯಾಂಟೀನ್ ಗುತ್ತಿಗೆಯ ನವೀಕರಣಕ್ಕಾಗಿ ರಾಜ್ಯ ಬಿಜೆಪಿ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಆರು ತಿಂಗಳುಗಳಿಂದ ಬಿಬಿಎಂಪಿಗೆ ಕ್ಯಾಂಟೀನ್ ವೆಚ್ಚದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಯಾವುದೇ ಕ್ಷಣದಲ್ಲಿ ಉಳಿದ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ನಿಲ್ಲಿಸಬಹುದು’ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
‘ನಮ್ಮ ಸರಕಾರ ಬೆಂಗಳೂರು ನಗರದ ಎಲ್ಲ 198 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲಿ ಈಗ 40 ಕ್ಯಾಂಟಿನ್ಗಳು ಮುಚ್ಚಿವೆ. ಬೆಂಗಳೂರು ನಗರವೂ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್ಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.
‘ಇಂದಿರಾ ಕ್ಯಾಂಟೀನ್ಗಳಿಗೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಒಂದು ನೆಪ ಮಾತ್ರ. ರಾಜ್ಯ ಬಿಜೆಪಿ ಸರಕಾರ ದುರುದ್ದೇಶದಿಂದ ಕ್ಯಾಂಟೀನ್ನ ಊಟ-ತಿಂಡಿಯ ಗುಣಮಟ್ಟವನ್ನು ಕೆಡಿಸುತ್ತಿದೆ. ಇದರ ಜೊತೆಗೆ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ.
''ರಾಜ್ಯದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್ಗಳನ್ನು ತೆರೆದು ಗುಣಮಟ್ಟದ ಊಟ-ತಿಂಡಿ ನೀಡಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಒತ್ತಾಯಿಸುತ್ತೇನೆ. ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ಗಳ ಮುಂದೆ ಧರಣಿ ಕೂರುತ್ತೇನೆ''
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಿಸಿತ್ತು. ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ @BJP4Karnataka, ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುತ್ತಿದೆ.
— Siddaramaiah (@siddaramaiah) November 3, 2022
7/8#IndiraCanteen pic.twitter.com/h7XMFDuYZR