ದ.ಕ ಜಿಲ್ಲೆಯ ಕಬಕದಲ್ಲಿ ಕೆಎಸ್ಸಿಎಗೆ 23.25 ಎಕರೆ ಕಂದಾಯ ಜಮೀನನ್ನು ಗುತ್ತಿಗೆ ನೀಡಲು ಸಂಪುಟ ತೀರ್ಮಾನ
ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು
![ದ.ಕ ಜಿಲ್ಲೆಯ ಕಬಕದಲ್ಲಿ ಕೆಎಸ್ಸಿಎಗೆ 23.25 ಎಕರೆ ಕಂದಾಯ ಜಮೀನನ್ನು ಗುತ್ತಿಗೆ ನೀಡಲು ಸಂಪುಟ ತೀರ್ಮಾನ ದ.ಕ ಜಿಲ್ಲೆಯ ಕಬಕದಲ್ಲಿ ಕೆಎಸ್ಸಿಎಗೆ 23.25 ಎಕರೆ ಕಂದಾಯ ಜಮೀನನ್ನು ಗುತ್ತಿಗೆ ನೀಡಲು ಸಂಪುಟ ತೀರ್ಮಾನ](https://www.varthabharati.in/sites/default/files/images/articles/2022/11/3/355181-1667497457.jpg)
ಬೆಂಗಳೂರು, ನ.3: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮ ಸರ್ವೆ ನಂಬರ್ 260/ಪಿ1ರಲ್ಲಿ 23.25 ಎಕರೆ ಜಮೀನನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ (Karnataka State Cricket Association) ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 73/1ರಲ್ಲಿ 0.07 ಎಕರೆ(ಏಳು ಸೆಂಟ್) ಮತ್ತು ಸರ್ವೆ ನಂಬರ್ 265/1ಎ1ಎರಲ್ಲಿ 0.03 ಎಕರೆ(ಮೂರು ಸೆಂಟ್) ಒಟ್ಟು 10 ಸೆಂಟ್ ಜಮೀನನ್ನು ಸೇವಾ ಭಾರತಿ ಸಂಸ್ಥೆಗೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.
ಬಳ್ಳಾರಿ ನಗರದ ನಲ್ಲಚೆರವು ಪ್ರದೇಶದದಲ್ಲಿ ಒಟ್ಟು 19.36 ಎಕರೆ ಜಮೀನನ್ನು ಕ್ರಿಕೆಟ್ ಆದ ಮೈದಾನಕ್ಕಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುರಳಿಬಾಳೆಬೈಲು ಗ್ರಾಮದಲ್ಲಿ ಒಂದು ಎಕರೆ ಗೋಮಾಳ ಜಮೀನನ್ನು ಸಾರ್ವಜನಿಕ ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ಶ್ರೀ ಕ್ಷತ್ರಿಯ ಮರಾಠ ಸಮಾಜಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ಗ್ರಾಮದಲ್ಲಿ ಪಿಪಿಪಿ ಯೋಜನೆಯಡಿ ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಆಧುನಿಕ ಮಾರುಕಟ್ಟೆಯನ್ನು ನಿರ್ಮಿಸಲು ಶೋಭಾ ಅಸೆಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 2022-23 ಯೋಜನೆಯಡಿ ಪ್ರಸಕ್ತ ಸಾಲಿನ ಎ.21ರಂದು ಸರಕಾರಿ ಆದೇಶದನುಸಾರ ಅನುಮೋದನೆ ನೀಡಿರುವ ಕ್ರಿಯಾ ಯೋಜನೆ ಪಟ್ಟಿಯಲ್ಲಿನ ಕಾಮಗಾರಿಗಳ ಬದಲಿಗೆ ಇತರೆ ಕಾಮಗಾರಿಗಳಿಗೆ ಬಿಬಿಎಂಪಿಯ ಟೆಂಡರ್ ಆಹ್ವಾನಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ರಾಜ್ಯ ವಿಸ್ತೃತ ಜಾಲ ಯೋಜನೆಯನ್ನು 931.15 ಕೋಟಿ ರೂ.ವೆಚ್ಚದಲ್ಲಿ ‘ಕೆಎಸ್ವಾನ್ 3.0’ರಡಿಯಲ್ಲಿ ವಿಸ್ತರಿಸಲು ಮತ್ತು ಉನ್ನತೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ರಾಜ್ಯ ಗೃಹ ಮಂಡಳಿಯು ವಸತಿ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲಕರಿಗೆ ಸಾಂತ್ವನ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.