ಜೈಲಿನಲ್ಲಿ ಸೊಳ್ಳೆ ಕಾಟ: ಕೊಂದ ಸೊಳ್ಳೆಗಳನ್ನು ಬಾಟಲಿಯಲ್ಲಿ ನ್ಯಾಯಾಲಯಕ್ಕೆ ತಂದ ಗ್ಯಾಂಗ್ಸ್ಟರ್!
![ಜೈಲಿನಲ್ಲಿ ಸೊಳ್ಳೆ ಕಾಟ: ಕೊಂದ ಸೊಳ್ಳೆಗಳನ್ನು ಬಾಟಲಿಯಲ್ಲಿ ನ್ಯಾಯಾಲಯಕ್ಕೆ ತಂದ ಗ್ಯಾಂಗ್ಸ್ಟರ್! ಜೈಲಿನಲ್ಲಿ ಸೊಳ್ಳೆ ಕಾಟ: ಕೊಂದ ಸೊಳ್ಳೆಗಳನ್ನು ಬಾಟಲಿಯಲ್ಲಿ ನ್ಯಾಯಾಲಯಕ್ಕೆ ತಂದ ಗ್ಯಾಂಗ್ಸ್ಟರ್!](https://www.varthabharati.in/sites/default/files/images/articles/2022/11/4/355268-1667580226.jpg)
ಮುಂಬೈ: ಗ್ಯಾಂಗ್ಸ್ಟರ್ ಒಬ್ಬ ಸೊಳ್ಳೆಗಳನ್ನು ಬಾಟಲಿಯಲ್ಲಿ ತಂದು ಜೈಲಿನಲ್ಲಿ ಸೊಳ್ಳೆ ಪರದೆ ಬಳಸಲು ಅನುಮತಿ ಕೋರಿದ ಘಟನೆ ಮುಂಬೈಯಲ್ಲಿ ನಡೆದಿದೆ. ಗ್ಯಾಂಗ್ಸ್ಟರ್ ಐಜಾಜ್ ಅಲಿಯಾಸ್ ಅಜ್ಜು ಯೂಸುಫ್ ಲಕ್ಡಾವಾಲಾ ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಸೊಳ್ಳೆಗಳನ್ನು ತುಂಬಿದ ಬಾಟಲಿಯನ್ನು ತಂದಿದ್ದು, ತಲೋಜಾ ಕೇಂದ್ರ ಕಾರಾಗೃಹದಲ್ಲಿ ಸೊಳ್ಳೆ ಪರದೆಗಳನ್ನು ಬಳಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾನೆ.
ಲಕ್ಡಾವಾಲಾ ಮತ್ತು ಭೂಗತ ಪಾತಕಿ ಛೋಟಾ ರಾಜನ್ ನನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಜನ್ ದಿಲ್ಲಿಯ ತಿಹಾರ್ ಸೆಂಟ್ರಲ್ ಜೈಲಿನಲ್ಲಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣಗೆ ಹಾಜರಾಗಿದ್ದಾನೆ.
ಜೈಲಿನಲ್ಲಿ ಹಲವಾರು ಸೊಳ್ಳೆಗಳಿವೆ ಮತ್ತು ಡಿಕೆ ರಾವ್ ನಂತಹ ಇತರ ಗ್ಯಾಂಗ್ಸ್ಟರ್ಗಳಿಗೆ ಸೊಳ್ಳೆ ಪರದೆಗಳನ್ನು ಅನುಮತಿಸಲಾಗಿರುವುದರಿಂದ ತನಗೆ ಸೊಳ್ಳೆ ಪರದೆ ಹೊಂದಲು ಅನುಮತಿಸದಿರುವುದು ತಾರತಮ್ಯವಾಗಿದೆ ಎಂದು ವಾದಿಸಿದ್ದಾನೆ. ಎರಡು ವರ್ಷಗಳಿಂದ ಸೊಳ್ಳೆ ಪರದೆಯನ್ನು ಹೊಂದಿದ್ದರೂ ಜೈಲು ಅಧಿಕಾರಿಗಳು ಅದನ್ನು ತೆಗೆದುಕೊಂಡು ಹೋದರು ಎಂದು ಲಕ್ಡಾವಾಲಾ ಆರೋಪಿಸಿದ್ದಾನೆ.
ಸೊಳ್ಳೆ ಪರದೆಗಾಗಿ ಲಕ್ಡಾವಾಲಾ ಸಲ್ಲಿಸಿದ್ದ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿ ತಲೋಜಾ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕ ಸಲ್ಲಿಸಿದ್ದ ವರದಿಯನ್ನು ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವಲೋಕಿಸಿದ್ದಾರೆ. ಮಹಾರಾಷ್ಟ್ರ ಕಾರಾಗೃಹ ನಿಯಮಗಳ ಅಧ್ಯಾಯ 26 ನಿಯಮ-17ರ ಪ್ರಕಾರ ಕೈದಿಗಳಿಗೆ ಸೊಳ್ಳೆ ಪರದೆ ಕಟ್ಟಲು ಹಗ್ಗ ಮತ್ತು ಮೊಳೆಗಳನ್ನು ನೀಡುವಂತಿಲ್ಲ ಎಂದು ಜೈಲರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೈದಿಗಳ ಸುರಕ್ಷತೆಗಾಗಿ ನೆಟ್ ನೀಡುವಂತಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.
ಕೈದಿಗಳು 'ಒಡೋಮೋಸ್' ಅಥವಾ ಇತರ ಸೊಳ್ಳೆ ನಿವಾರಕಗಳನ್ನು ಬಳಸಬಹುದು ಹಾಗಾಗಿ ಅರ್ಜಿಯನ್ನು ತಿರಸ್ಕರಿಸುವಂತೆ ಎಂದು ಜೈಲರ್ ವಾದಿಸಿದ್ದಾರೆ. ಜೈಲರ್ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಪಾಟೀಲ್ ಅವರು ಸೊಳ್ಳೆಪರದೆಗಾಗಿ ಲಕ್ಡಾವಾಲಾ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಸೊಳ್ಳೆಗಳಿಗೆ ಓಡೋಮೋಸ್ ಅಥವಾ ಇತರ ನೈಸರ್ಗಿಕ ಕ್ರೀಮ್ಗಳನ್ನು ಬಳಸಲು ಸೂಚಿಸಿದ್ದಾರೆ.
ಮುಂಬೈನ ವಿವಿಧ ನ್ಯಾಯಾಲಯಗಳಲ್ಲಿ ತಲೋಜಾ ಜೈಲಿನ ಕೈದಿಗಳಿಂದ ಸೊಳ್ಳೆಗಳ ಬಗ್ಗೆ ದೂರು ಸಲ್ಲಿಸಿದ ಅರ್ಜಿಗಳಿವೆ. ಆದರೆ, ರಾವ್ ಅವರಂತಹ ಕೆಲವರಿಗೆ ಮಾತ್ರ ನೆಟ್ ಬಳಸಲು ನ್ಯಾಯಾಲಯಗಳು ಅನುಮತಿ ನೀಡಿವೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರೊ.ಆನಂದ್ ತೇಲ್ತುಂಬ್ಡೆ ಅವರು ಅಸ್ತಮಾದಿಂದ ಬಳಲುತ್ತಿದ್ದು, ತಲೋಜಾ ಜೈಲು ಆಸ್ಪತ್ರೆಯಲ್ಲಿ ಇರುವ ಕಾರಣ 'ಒಡೋಮೋಸ್' ಮತ್ತು ಇತರ ಸೊಳ್ಳೆ ನಿವಾರಕಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವಕೀಲ ದೀಪಾ ಪುಂಜ್ವಾನಿ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಮುಂಬೈನ ಎನ್ಐಎ ನ್ಯಾಯಾಲಯದ ಮುಂದೆ ಆ ಮನವಿಗೆ ಜೈಲು ಅಧಿಕಾರಿಗಳು ಇನ್ನೂ ಉತ್ತರಿಸಿಲ್ಲ ಎಂದು ವರದಿಯಾಗಿದೆ.