ಇನ್ನೂ ಪತ್ತೆಯಾಗದ ಉತ್ತರಾಖಂಡ ಮೂಲದ ಯುವತಿ

ಮಂಗಳೂರು : ಉತ್ತರಾಖಂಡ ರಾಜ್ಯದ ಭಾವನಾ ತಿವಾರಿ ಎಂಬವರ ಪುತ್ರಿ ಹಿಮಾನಿ (25) ಎಂಬಾಕೆ ಅ.26ರಿಂದ ಕಾಣೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಆಕೆಯನ್ನು ಪತ್ತೆ ಹಚ್ಚಿಕೊಡುವಂತೆ ಭಾವನಾ ತಿವಾರಿ ನಗರದ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
2018ರಲ್ಲಿ ತನಗೆ ಮಹಾರಾಷ್ಟ್ರದ ಬಿಎಸ್ಎಫ್ನಲ್ಲಿ ಸರಕಾರಿ ಕೆಲಸ ಸಿಕ್ಕಿದೆ ಎನ್ನುತ್ತಾ ಹಿಮಾನಿ ಮುಂಬೈಗೆ ಹೋಗಿದ್ದು, ಬಳಿಕ ಆಗಾಗ ಮೊಬೈಲ್ ಕರೆಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದಳು. 2022ರ ಫೆಬ್ರವರಿಯಲ್ಲಿ ತನಗೆ ಮಂಗಳೂರಿಗೆ ವರ್ಗಾವಣೆ ಆಗಿದೆ ಎಂದಿದ್ದ ಹಿಮಾನಿ ಕಳೆದ ಅಕ್ಟೋಬರ್ನಲ್ಲಿ ಹಣದ ಅವಶ್ಯಕತೆ ಇದೆ ಎಂದಾಗ ಗೂಗಲ್ಪೇ ಮೂಲಕ ಹಣ ಕಳುಹಿಸಿಕೊಟ್ಟಿದ್ದೆವು. ಅಕ್ಟೋಬರ್ 26ರಂದು ಮಧ್ಯಾಹ್ನ 12:40ಕ್ಕೆ ಕರೆ ಮಾಡಿದ್ದ ಹಿಮಾನಿ ಮಂಗಳೂರಿನ ಕೇಂದ್ರ ರೈಲು ನಿಲ್ದಾಣದ ಹತ್ತಿರವಿರುವ ಅಮಿತ್ ಮೊಬೈಲ್ ಶಾಪ್ ಬಳಿ ಇರುವುದಾಗಿ ತಿಳಿಸಿದ್ದಾಳೆ. ನಂತರ ಅವಳ ಫೋನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ತಕ್ಷಣ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಬಳಿ ಹಿಮಾನಿಯ ಬಗ್ಗೆ ವಿಚಾರಿಸಿದಾಗಲೂ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ನಾಪತ್ತೆಯಾದ ಹಿಮಾನಿಯನ್ನು ಪತ್ತೆಮಾಡಿಕೊಡುವಂತೆ ದೂರಿನಲ್ಲಿ ಭಾವನಾ ತಿವಾರಿ ಮನವಿ ಮಾಡಿದ್ದಾರೆ.
ಈಕೆಯನ್ನು ಕಂಡವರು ಪಾಂಡೇಶ್ವರ ಠಾಣೆ (0824-2220518)ಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.