ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್ ರೀತಿ ಬಿಜೆಪಿ ಬಿಂಬಿಸುತ್ತಿದೆ: ಡಿ.ಕೆ.ಶಿವಕುಮಾರ್
ಬೆಳಗಾವಿ, ನ.7: ಬಿಜೆಪಿಯವರು ನನ್ನನ್ನು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಆಗಿ ಬಿಂಬಿಸಿದ್ದಾರೆ. ರಾಜಕೀಯವಾಗಿ ಬಲಿಷ್ಠವಾಗಿ ಬೆಳೆಯುವವರ ವಿರುದ್ಧ ಈ ರೀತಿ ಆರೋಪ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಈ.ಡಿ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿರುವ ಕುರಿತು ಸೋಮವಾರ ಬೆಳಗಾವಿಯ ಸಾಂಬ್ರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಹೆಚ್ಚು ಬಲಶಾಲಿ ಆದಷ್ಟು ಹೆಚ್ಚು ಶತ್ರುಗಳು, ಬಲಶಾಲಿ ಅಲ್ಲದಿದ್ದರೆ ಶತ್ರುಗಳೇ ಇಲ್ಲ. ಬಿಜೆಪಿಯವರು ತಮಗೆ ಯಾರೆಲ್ಲಾ ರಾಜಕೀಯವಾಗಿ ಅಪಾಯ ಎಂದು ತಿಳಿಯುತ್ತಾರೋ ಅವರಿಗೆ ಈ ರೀತಿ ಕಿರುಕುಳ ನೀಡುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.
ಪೊಲೀಸ್ ತನಿಖೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಯಾವುದೇ ಆರೋಪ ಇಲ್ಲ ಎಂದು ಪ್ರಕರಣ ಮುಕ್ತಾಯ ಹಂತದಲ್ಲಿ ಇದ್ದಾಗ, ಇವರು ರಾಜಕೀಯ ಉದ್ದೇಶದಿಂದ ಪ್ರಭಾವ ಬೀರಿ ಪ್ರಕರಣವನ್ನು ಸಿಬಿಐಗೆ ನೀಡಿ ಅವರನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶಿವಕುಮಾರ್ ದೂರಿದರು.
ಇಂಧನ ಇಲಾಖೆ ಯೋಜನೆಗಳ ತನಿಖೆ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ನಾನು ಇಂಧನ ಸಚಿವನಾಗಿದ್ದ ಕಾಲದ ಯೋಜನೆಗಳನ್ನು ತನಿಖೆ ಮಾಡಿಸಬೇಕು ಎಂದು ಹೇಳಿದ್ದಾರೆ. ಅವರು ತನಿಖೆ ಮಾಡಿಸಲಿ. ನಾನು ಸ್ವಾಗತಿಸುತ್ತೇನೆ. ನಾನು ಕೂಡ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ’ ಎಂದರು.
ಇಂಧನ ಇಲಾಖೆ, ನೀರಾವರಿ ಇಲಾಖೆ ಎಲ್ಲವನ್ನೂ ಮಾಡಲಿ. ಬಿಜೆಪಿ ಆಡಳಿತದಲ್ಲಿ ಏನೆಲ್ಲಾ ಆಗಿದೆ, 100 ಕೋಟಿ ರೂ. ಯೋಜನೆಯನ್ನು 300 ಕೋಟಿ ರೂ.ಯೋಜನೆಯಾಗಿ ಹೇಗೆ ಮಾಡಿದ್ದಾರೆ, 300 ಕೋಟಿ ರೂ.ಯೋಜನೆಯನ್ನು 700 ಕೋಟಿ ರೂ.ಯೋಜನೆಯಾಗಿ ಮಾಡಿ ಹೇಗೆ ಗುತ್ತಿಗೆ ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಅಂತಹ ಸಾಕಷ್ಟು ಉದಾಹರಣೆಗಳಿವೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ.ಬಂಡವಾಳಕ್ಕೆ ಸಹಿ ಎಂದು ಹೇಳಿದ್ದಾರೆ. ಸಮಯ ಬರಲಿ, ಎಲ್ಲದಕ್ಕೂ ನಾನು ಉತ್ತರ ನೀಡುತ್ತೇನೆ ಎಂದು ಅವರು ಹೇಳಿದರು.
ಸರಕಾರಿ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಿ ಕಡ್ಡಾಯದ ಬಗ್ಗೆ ಕೇಳಿದಾಗ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಪ್ರತಿಯೊಬ್ಬರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಶಿಕ್ಷಕರು ಯಾಕೆ ಬರಬೇಕು? ಕಾರ್ಯಕರ್ತರು ಹಾಗೂ ಜನರನ್ನು ಕರೆದುಕೊಂಡು ಬಂದು ಕಾರ್ಯಕ್ರಮ ಮಾಡಲಿ. ಶಿಕ್ಷಕರನ್ನು ಇವರ ರಾಜಕಾರಣಕ್ಕೆ ಬಳಸಿಕೊಳ್ಳಲು ಈ ರೀತಿ ಆದೇಶ ಹೊರಡಿಸಿದ್ದಾರೆ ಎಂದು ಕಿಡಿಗಾರಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಬಗ್ಗೆ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಬೇರೆ ಕೆಲವು ನಾಯಕರು ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಸೇರಲು ಅರ್ಜಿ ಹಾಕಿದ್ದಾರೆ. ಕೆಲವರು ಸದಸ್ಯತ್ವ ತೆಗೆದುಕೊಂಡಿದ್ದು, ಅವರು ಪಕ್ಷ ಸೇರುವಾಗ ಜಿಲ್ಲಾವಾರು ಪಟ್ಟಿ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇಟ್ಟವರು ಪಕ್ಷ ಸೇರಲು ಅರ್ಜಿ ಹಾಕಬಹುದು ಎಂದರು.