ಡಬಲ್ ಇಂಜಿನ್ ಸರಕಾರದ್ದು ಸಾಯ್ಲೆನ್ಸರ್ ಮಾತ್ರ ಸದ್ದು: ಯು.ಟಿ.ಖಾದರ್

ಮಂಗಳೂರು, ನ.8: ಬಿಜೆಪಿಯದ್ದು ಜನ ಸಂಕಲ್ಪ ಯಾತ್ರೆ ಅಲ್ಲ. ಅದು ಸಂಕಷ್ಟ ಯಾತ್ರೆ. ಡಬಲ್ ಇಂಜಿನ್ ಸರಕಾರ ನಮ್ಮದು ಎಂದು ಹೇಳುವ ಬಿಜೆಪಿಯ ಸರಕಾರದ ಇಂಜಿನ್ ಕೆಟ್ಟು ಹೋಗಿದೆ. ಸಾಯ್ಲೆನ್ಸರ್ ಮಾತ್ರ ಸದ್ದು ಮಾಡುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ವ್ಯಂಗ್ಯ ಮಾಡಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರಕಾರ 2019ರಿಂದ ಈವರೆಗಿನ ಬಜೆಟ್ನ ಭರವಸೆ, ಘೋಷಣೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.
ಪಣಜಿಯಿಂದ ಮಂಗಳೂರಿಗೆ ವಾಟರ್ ವೇ ಇನ್ನೂ ಆರಂಭ ಆಗಿಲ್ಲ. ಸಾಗರ ಮಾಲ ಯೋಜನೆ ಬಗ್ಗೆ ಕಳೆದ ಐದು ವರ್ಷಗಳಿಂದ ಮಾತನಾಡುತ್ತಿದ್ದಾರೆ. ಮೀನುಗಾರರಿಗೆ ಮನೆ ಕೊಡುವುದಾಗಿ ಹೇಳಿ ಇನ್ನೂ ಕೊಟ್ಟಿಲ್ಲ. ಒಳನಾಡು ಮೀನುಗಾರಿಕೆಯಡಿ ಸಿಗಡಿ ಕೃಷಿ ಇನ್ನೂ ಗುರಿ ತಲುಪಿಲ್ಲ. ಕೇರಳ ಮಾದರಿ ಸಾಲ ಪರಿಹಾರ ಆಯೋಗ ರಚನೆ ಇನ್ನೂ ಆಗಿಲ್ಲ. ಒಟ್ಟಿನಲ್ಲಿ ಮೀನುಗಾರರಿಗೆ ಬಿಜೆಪಿ ಸರಕಾರ ಮೋಸ ಮಾಡಿದ್ದಷ್ಟು ಯಾರೂ ಮಾಡಿಲ್ಲ. ಮೀನುಗಾರರ ಮುಗ್ಧತೆಯ ಲಾಭ ಪಡೆಯುತ್ತಾರೆ ಎಂದು ಯು.ಟಿ.ಖಾದರ್ ಆರೋಪಿಸಿದರು.
ಡಬಲ್ ಇಂಜಿನ್ ಸರಕಾರ ಅಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕನಿಷ್ಠ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ತಾಕತ್ತು ಸರಕಾರಕ್ಕೆ ಇಲ್ಲ. ಮುಖ್ಯ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ನನ್ನ ಕ್ಷೇತ್ರದ ಪಿಡಬ್ಲ್ಯುಡಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಿಸಲು 5 ಲಕ್ಷ ರೂ. ಅನುದಾನ ಮಂಜೂರಾಗಿದೆ. ವಾಸ್ತವದಲ್ಲಿ ಕನಿಷ್ಠ 50 ಲಕ್ಷ ರೂ.ಗಳಾದರೂ ಬೇಕಾಗಿದೆ. ಶಾಸಕ ನಿಧಿಯನ್ನು ಬಳಸಿಕೊಂಡು ದೇರಳಕಟ್ಟೆ ಸೇರಿದಂತೆ ನನ್ನ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕುಚ್ಚಲಕ್ಕಿ ನೀಡುವುದಾಗಿ ಕಳೆದ ಮೂರು ವರ್ಷಗಳಿಂದ ಹೇಳಲಾಗುತ್ತಿದೆ. ಇನ್ನೂ ಆರಂಭವಾಗಿಲ್ಲ. ಕುಚ್ಚಲಕ್ಕಿ ಲಕ್ಷದ್ವೀಪಕ್ಕೆ ರಫ್ತಾಗುತ್ತದೆ. ಆದರೆ ಇಲ್ಲಿಗೆ ನೀಡಲು ಆಗುತ್ತಿಲ್ಲ. ಕುಚ್ಚಲಕ್ಕಿಗಾಗಿ ಇಲ್ಲಿನ ಶಾಸಕರು, ಸಚಿವರು ಮನವಿ ಸಲ್ಲಿಸುವ ಪರಿಸ್ಥಿತಿ ಬಿಜೆಪಿಯದ್ದು ಎಂದು ಖಾದರ್ ಹೇಳಿದರು.
ಸತೀಶ್ ಜಾರಕಿಹೊಳಿಯವರ ಹೇಳಿಕೆ ವೈಯಕ್ತಿಕವಾಗಿದ್ದು, ಪಕ್ಷದ ಅಧಿಕೃತ ವೇದಿಕೆಯಲ್ಲಿ ಎಲ್ಲೂ ಹೇಳಿಲ್ಲ. ಹಾಗಿದ್ದರೂ ಯಾರಿಗೂ ನೋವಾಗುವ ಹೇಳಿಕೆ ಯಾರೂ ನೀಡಬಾರದು. ಈ ಬಗ್ಗೆ ಈಗಾಗಲೇ ಪಕ್ಷದ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಖಾದರ್ ಪ್ರತಿಕ್ರಿಯಿಸಿದರು.
ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಕುರಿತಾದ ವಿವಾದದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಎಲ್ಲಾ ವಿಷಯವನ್ನೂ ರಾಜಕೀಯಗೊಳಿಸುವುದು ಮಾತ್ರ ಗೊತ್ತಿರುವುದು. ಕಾನೂನು ಪ್ರಕಾರ ಆಗಬೇಕಾದ ವಿಚಾರವದು. ಅದರಂತೆ ಆಗಲಿ. ರಾಜ್ಯದಲ್ಲಿ ವಿದೇಶಕ್ಕೆ ರಫ್ತು ಮಾಡಲು 11 ಫ್ಯಾಕ್ಟರಿಗಳಿವೆ. ಎಲ್ಲ ಬಿಜೆಪಿಯ ಪ್ರಾಯೋಜಕರದ್ದು. ಅದನ್ನು ಬಂದ್ ಮಾಡಿಸುವ ತಾಕತ್ತು ಅವರಿಗಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದು. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಗೋವಿನ ಬಗ್ಗೆ ಮಾತನಾಡುವ ಬಿಜೆಪಿ ಗೋ ಸಂತತಿ ರಕ್ಷಣೆಗೆ, ಹೆಚ್ಚಿಸಲು ಏನು ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಲಿ. ನಮ್ಮ ಅವಧಿಯಲ್ಲಿ ಪಶು ಭಾಗ್ಯ ಯೋಜನೆಯಡಿ ಉಚಿತವಾಗಿ ಪಶುಗಳನ್ನು ನೀಡುವುದು ಹಾಗೂ ಮೇವಿಗೆ ದುಡ್ಡು ನೀಡಲಾಗುತ್ತಿತ್ತು. ಕೆಂಜಾರುವಿನಲ್ಲಿ ಕಪಿಲಾ ಗೋಶಾಲೆಯನ್ನೇ ಒಡೆದು ಹಾಕಿ ಗೋವುಗಳನ್ನು ಬೀದಿಪಾಲು ಮಾಡಿದಾಗ ಇವರಿಗೆ ಕಾಳಜಿ ಇರಲಿಲ್ಲವೇ. ಆ ಶಾಪ ಬಿಜೆಪಿಯವರಿಗೆ ತಟ್ಟದೆ ಇರಲಿದೆಯೇ? ಗೋ ಹತ್ಯೆ ನಿಷೇಧ ಕುರಿತಂತೆ ಇಂದಿರಾಗಾಂಧಿಯವರು ಇಡೀ ದೇಶಕ್ಕೆ ಒಂದು ಕಾನೂನು ಜಾರಿಗೊಳಿಸಿದ್ದರು. ಆದರೆ ಇದೀಗ ಗೋವಾ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ರಾಜ್ಯಕ್ಕೊಂದು ಕಾನೂನು ಬಿಜೆಪಿಯವರದ್ದು. ದೇಶಕ್ಕೆ ಮಾದರಿ ಕಾನೂನು ಜಾರಿಗೊಳಿಸಲು ದಿಲ್ಲಿಯಲ್ಲಿ ಕುಳಿತವರಿಗೆ ಯಾರ ಭಯ ಎಂದು ಖಾದರ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್, ನೀರಜ್ ಪಾಲ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವ, ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.
