ಹಿಂದುಗಳನ್ನು ಟೀಕಿಸಿದರೆ ಅಲ್ಪಸಂಖ್ಯಾತರ ಮತ ಬರುತ್ತೆ ಎಂಬ ಭ್ರಮೆ: ಸಿಎಂ ಬೊಮ್ಮಾಯಿ
"ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ"

ಉಡುಪಿ : ಸತೀಶ್ ಜಾರಕಿಹೊಳಿ ಹರೇ ಬರೇ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಅಲ್ಪಸಂಖ್ಯಾತ ಮತ ಬರುತ್ತದೆ ಎಂದು ಅವರು ಭ್ರಮೆಯಲ್ಲಿದ್ದಾರೆ. ಸತೀಶ್ ಜಾರಕಿಹೋಳಿ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೋಭೆ ಭರಿತ ಹೇಳಿಕೆ ಎಂಬುದು ದೇಶದ್ರೋಹದ ಕೆಲಸ. ಈ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೌನ ಯಾಕೆ? ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ? ಸತೀಶ್ ಇನ್ನೂ ಸಮರ್ಥಿಸಿ, ಹುಳಿ ಹಿಂಡುವ ಕೆಲಸ ಮಾಡುತ್ತಿ ದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಲ್ಪಸ್ಪಲ್ಪ ಉಳಿದಿದೆ. ನೆಪಮಾತ್ರದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸುತ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾ ಬದ್ಧವಾದ ಹೇಳಿಕೆ. ಹಿಂದೂ ಭಾವನೆ ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದು ಅವರು ತಿಳಿಸಿದರು.
ಸಿಬಿಐ ಅಂದರೆ ಕಿರುಕುಳ ಬ್ಯೂರೋ ಆಫ್ ಇಂಡಿಯಾ ಎಂಬ ಡಿಕೆ ಸುರೇಶ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಿರುಕುಳವಾದರೆ ಯಾಕೆ ಭಯಪಡಬೇಕು. ಯಾವುದೇ ತನಿಖೆ ಇದ್ದರೂ ನಾನು ಸಿದ್ಧ ಇದ್ದೇನೆ ಎಂದು ಒಂದು ಕಡೆ ಹೇಳುತ್ತಾರೆ. ಇನ್ನೊಂದು ಕಡೆ ಇದನ್ನು ಕೂಡ ಹೇಳುತ್ತಾರೆ. ತಪ್ಪು ಮಾಡದಿದ್ದರೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.







