ಬೆಂಗಳೂರು | ಕುರುಹಿನಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ನಲ್ಲಿ ಅಕ್ರಮ ಆರೋಪ: ಮಾಜಿ ಅಧ್ಯಕ್ಷ ಸೇರಿ ಐವರ ಬಂಧನ

ಬೆಂಗಳೂರು, ನ. 8: ಕುರುಹಿನಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ನಲ್ಲಿ ಅಕ್ರಮವೆಸಗಿದ್ದ ಆರೋಪದಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಈಶ್ವರಪ್ಪ, ಸಾಲಗಾರರಾದ ದಯಾನಂದ್, ಚಂದ್ರಶೇಖರ್ ಹಾಗೂ ಸುರಬಿ ಚಿಟ್ಸ್ ಮಾಲಕ ಬಿ.ಟಿ.ಮೋಹನ್ ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುರುಹಿನ ಶೆಟ್ಟಿ ಬ್ಯಾಂಕ್ನಲ್ಲಿ 2011ರಿಂದ 22ರ ವರೆಗೆ ಶ್ರೀನಿವಾಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನೂರಾರು ಗ್ರಾಹಕರ ಠೇವಣಿ ರೂಪದಲ್ಲಿ ಬಂದಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸಾಲಮಂಜೂರಾತಿ ಸಮಿತಿ ಅಧಿಕಾರಿಗಳ ಮುಖಾಂತರ ದಾಖಲಾತಿ ಪರಿಶೀಲಿಸದೆ ಸಾಲ ಮಂಜೂರು ಮಾಡಿಸಿದ್ದರು ಎನ್ನಲಾಗಿದೆ.
ನೋಟು ಅಮಾನ್ಯೀಕರಣ ಹಾಗೂ ಕೋವಿಡ್ ನೆಪ ಹೇಳಿ ಹಲವು ವರ್ಷಗಳಿಂದ ಸಾಲಗಾರರು ಸಹ ಹಣ ಪಾವತಿ ಮಾಡಿರಲಿಲ್ಲ. ಸ್ವತ್ತುಗಳ ಮೇಲೆ ನಿಗದಿಗಿಂತ ಹೆಚ್ಚ ಸಾಲ ನೀಡುವುದರ ಜೊತೆಗೆ ಬೆಂಗಳೂರಿನಲ್ಲಿ 10 ಶಾಖಾ ಕಚೇರಿ ಹೊಂದಿರುವ ಸುರಭಿ ಚಿಟ್ಸ್ ಲಿಮಿಟೆಡ್ ಮಾಲಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅನರ್ಹರಿಗೆ ಕೋಟಿಗಟ್ಟಲೇ ಸಾಲ ನೀಡಿದ್ದರು ಎಂದು ತಿಳಿದುಬಂದಿದೆ.
ಕಾಲಕ್ರಮೇಣ ಠೇವಣಿಯ ರೂಪದಲ್ಲಿ ಸುಮಾರು 90 ಕೋಟಿ ಪೈಕಿ 78 ಕೋಟಿ ಹಣ ದುಬರ್ಳಕೆ ಮಾಡಿಕೊಂಡಿದ್ದರು. ಗ್ರಾಹಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.







