ಮೈಸೂರು | ಜಾಗದ ವಿಚಾರಕ್ಕೆ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಕೊಲೆ, ಇಬ್ಬರ ಬಂಧನ: ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ
''ಕೊಲೆ ಮಾಡುವ ಉದ್ದೇಶದಿಂದಲೇ ಕಾರು ಖರೀದಿಸಿದ್ದರು...''
ಮೈಸೂರು,ನ.8: ಮೈಸೂರಿನಲ್ಲಿ ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಕೊಲೆ ಪ್ರಕರಣ ಸಂಬಂಧ, ನಾಲ್ಕೇ ದಿನಕ್ಕೆ ಮೈಸೂರು ನಗರ ಪೊಲಿಸರು ಪ್ರಕರಣ ಭೇದಿಸಿದ್ದು, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ಕಾರು ಖರೀದಿಸಿದ್ದರು ಎಂಬ ಮಾಹಿತಿ ನೀಡಿದರು.
ಪ್ರಕರಣ ಕುರಿತು ಮಂಗಳವಾರ ಪೊಲೀಸ್ ಅಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನವೆಂಬರ್ 4 ರಂದು ಸಂಜೆ ಅಫಘಾತ ಮಾದರಿಯಲ್ಲಿ ಕೇಂದ್ರ ಗುಪ್ತಚರ ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ ಅವರ ಕೊಲೆಯಾಗಿತ್ತು. ಮೈಸೂರು ನಗರದ ಮಾನಸ ಗಂಗೋತ್ರಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿತ್ತು. ಹಿಟ್ ಅಂಡ್ ರನ್ ಉದ್ದೇಶ ಪೂರ್ವಕವಾಗಿಯೇ ನಡೆದಿತ್ತು. ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ನಾಲ್ಕು ತಂಡ ರಚನೆ ಮಾಡಲಾಗಿತ್ತು ಎಂದರು.
''ಘಟನೆ ನಂತರ ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ ಅಳಿಯ ಪಕ್ಕದ ಮನೆಯ ಮಾದಪ್ಪ ಅವರ ಜೊತೆ ಜಾಗದ ವಿಚಾರಕ್ಕೆ ಗಲಾಟೆ ನಡೆದಿತ್ತು ಎಂದು ದೂರು ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ನಾವು ನಾಲ್ಕು ತಂಡವನ್ನು ರಚನೆ ಮಾಡಿ ತನಿಖೆ ಕೈಗೊಳ್ಳಲಾಯಿತು. ಆಗ ಮಾದಪ್ಪ ಅವರ ಕಿರಿಯ ಮಗ ಮನು ಎಂಬಾತ ಮತ್ತು ಆತನ ಸ್ನೇಹಿತರು ಈ ಕೊಲೆ ಮಾಡಿದ್ದಾರೆ ಎಂದು ತಿಳಿಯಿತು. ಈ ಸಂಬಂಧ ಕೊಲೆಗೆ ಉಪಯೋಗಿಸಿದ ಕಾರನ್ನು ಜಪ್ತಿ ಮಾಡಲಾಗಿದ್ದು, ಮನು ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.
ಇದನ್ನೂ ಓದಿ... 'ಹಿಂದೂ ಧರ್ಮ ಅನ್ನೋದು ಇಲ್ಲ...': ಬಿಜೆಪಿ ನಾಯಕ ರಮೇಶ್ ಕತ್ತಿ ವಿಡಿಯೋ ವೈರಲ್
''ಜಾಗದ ವಿಚಾರಕ್ಕೆ ಪದೆ ಪದೇ ಜಗಳವಾಗಿದ್ದು ಕೊಲೆಗೆ ಪ್ರಮುಖ ಕಾರಣವಾಗಿದೆ. ಮನು ಒಬ್ಬನೇ ಕಾರಿನಲ್ಲಿ ಇದ್ದರು. ಕೃತ್ಯಕ್ಕೂ ಮುನ್ನ ಅಧಿಕಾರಿಯ ಪ್ರತಿದಿನದ ಚಲನವಲನಗಳನ್ನ ಗಮನಿಸಿದ್ದಾರೆ. ಹೋಂಡಾ ಕಂಪನಿ ಕಾರಾಗಿದ್ದು. ರಘು ಎಂಬ ಯುವಕನಿಗೆ ಸೇರಿದ ಕಾರನ್ನ ಕೊಲೆ ಮಾಡುವ ಉದ್ದೇಶದಿಂದಲೇ ಖರೀದಿ ಮಾಡಿದ್ದರು. ಆರೋಪಿ ಮನು ಎಂಬಿಎ ಪದವೀಧರನಾಗಿದ್ದಾನೆ'' ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸಿಪಿ ಶಿವಶಂಕರ್ ಉಪಸ್ಥಿತರಿದ್ದರು.