ಹಿಂದೂ ಪದದ ಬಗ್ಗೆ ಹೇಳಿಕೆ ವಿಚಾರ: ಸತೀಶ್ ಜಾರಕಿಹೊಳಿ ವಿರುದ್ಧ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲು
![ಹಿಂದೂ ಪದದ ಬಗ್ಗೆ ಹೇಳಿಕೆ ವಿಚಾರ: ಸತೀಶ್ ಜಾರಕಿಹೊಳಿ ವಿರುದ್ಧ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲು ಹಿಂದೂ ಪದದ ಬಗ್ಗೆ ಹೇಳಿಕೆ ವಿಚಾರ: ಸತೀಶ್ ಜಾರಕಿಹೊಳಿ ವಿರುದ್ಧ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲು](https://www.varthabharati.in/sites/default/files/images/articles/2022/11/9/355850-1668014425.jpg)
ಬೆಂಗಳೂರು, ನ.9: ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದೊಂದು ಅಶ್ಲೀಲ ಪದವಾಗಿದೆ ಎನ್ನುವ ಹೇಳಿಕೆ ನೀಡಿರುವ ಆರೋಪದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ವಕೀಲ ಕೆ. ದಿಲೀಪ್ಕುಮಾರ್ ಎಂಬುವರು ನಗರದ 8ನೆ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.
ನಗರದ ವಕೀಲ ಕೆ. ದಿಲೀಪ್ ಕುಮಾರ್ ಎಂಬುವವರು ಬುಧವಾರ ದೂರು ದಾಖಲಿಸಿದ್ದು, ಗಲಭೆ ಮತ್ತು ಮಾನಹಾನಿ ಕೇಸ್ ಸಂಬಂಧ ಸತೀಶ್ ಜಾರಕಿಹೊಳಿ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನ್ಯಾಯಾಲಯವು ದೂರಿನ ವಿಚಾರಣೆಯನ್ನು ನ.18ಕ್ಕೆ ಮುಂದೂಡಿದೆ. ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಂದೂ ನಮ್ಮ ಪದವೇ ಅಲ್ಲ. ಇದು ಪರ್ಷಿಯನ್ನಿಂದ ಬಂದಿರುವ ಪದ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಆ ಪದದ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ. ಪರ್ಷಿಯನ್ ಪದವಾದ ಹಿಂದೂ ನಮ್ಮ ಪದ ಹೇಗಾಯಿತು. ಈ ವಿಷಯದಲ್ಲಿ ಚರ್ಚೆಯಾಗಬೇಕು. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ
ಈ ಸುದ್ದಿಯನ್ನು ಓದಿದ ನನಗೆ ಅವಮಾನವಾಗಿದೆ. ಇದರಿಂದ ನಾನು ಮಾನಸಿಕವಾಗಿ ಬಹಳ ಖಿನ್ನತೆಗೆ ಒಳಗಾಗಿದ್ದೇನೆ. ನನಗೆ ಸಾಕಷ್ಟು ಇತರ ಧರ್ಮದ ಸಾಕಷ್ಟು ಕಕ್ಷಿದಾರರು ಹಾಗೂ ಸ್ನೇಹಿತರಿದ್ದಾರೆ. ಅವರು ನನ್ನತ್ತ ಅವಮಾನ ಮತ್ತು ನಿರ್ಲಕ್ಷ್ಯದ ನೋಟದಲ್ಲಿ ನಗು ಬೀರಿದ್ದಾರೆ. ಹಿಂದೂ ಧರ್ಮದ ಕೆಲ ಸ್ನೇಹಿತರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಅವಮಾನ ಮತ್ತು ಮಾನಹಾನಿಗೆ ಗುರಿಯಾಗಿದ್ದಾರೆ. ನನ್ನ ಹಾಗೂ ಹಿಂದೂ ಧರ್ಮದ ಅಪಾರ ಜನರ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ದೂರುದಾರರು ಕೋರಿದ್ದಾರೆ.
ಹೀಗಾಗಿ, ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಐಪಿಸಿ 500 (ಮಾನಹಾನಿ) ಮತ್ತು 153(ಗಲಭೆ ಉಂಟು ಮಾಡಲು ಪ್ರಜೋಧನೆ)ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಆರೋಪಿಯ ವಿರುದ್ದ ಸಮನ್ಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು. ಪ್ರಕರಣದ ವಿಚಾರಣೆ ನಡೆಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ತನ್ನ ದೂರಿನಲ್ಲಿ ಮನವಿ ಮಾಡಿದ್ದಾರೆ.