ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಪ್ರಕರಣ: ಕಾರ್ಯಪಾಲಕ ಅಭಿಯಂತರ ನರಸಿಂಹರಾಜುಗೆ ಶಿಕ್ಷೆ

ಮಂಗಳೂರು, ನ.10: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದ ಬೆಂಗಳೂರು ಮೂಲದ ಕಾರ್ಯಪಾಲಕ ಅಭಿಯಂತರ ಎನ್. ನರಸಿಂಹರಾಜುಗೆ ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
2010ರ ಮಾ.24ರಂದು ನರಸಿಂಹರಾಜು ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ತೀರ್ಪು ನೀಡಿ ಆರೋಪಿ ನರಸಿಂಹರಾಜುಗೆ 3.6 ವರ್ಷ ಸಾದಾ ಸಜೆ ಹಾಗೂ 25,00,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 6 ತಿಂಗಳ ಸಜೆಗೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಉಪಾಧೀಕ್ಷಕ ಸದಾನಂದ.ಎಂ ದೂರು ನೀಡಿದ್ದರು. ಮತ್ತೋರ್ವ ಉಪಾಧೀಕ್ಷಕ ವಿಠಲದಾಸ್ ಪೈ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಶೇಷ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದಿಸಿದ್ದರು.
ಆರೋಪಿ ಎನ್. ನರಸಿಂಹರಾಜು ವಿರುದ್ಧ 2009ರ ಸೆಪ್ಟಂಬರ್ 8ರಂದು ಟ್ರ್ಯಾಪ್ ಪ್ರಕರಣವೂ ದಾಖಲಾಗಿತ್ತು. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ ಎಂದು ತಿಳಿದು ಬಂದಿದೆ.