ಚಿಕ್ಕಮಗಳೂರು | ನಿಯಂತ್ರಣಕ್ಕೆ ಬಾರದ ಎಲೆ ಚುಕ್ಕಿ ರೋಗ: ರೈತ ಆತ್ಮಹತ್ಯೆ
ಚಿಕ್ಕಮಗಳೂರು, ನ.10: ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ತೀವ್ರಗೊಂಡಿದ್ದು, ತನ್ನ ಅಡಿಕೆ ತೋಟಕ್ಕೂ ರೋಗ ಹರಡಿದ್ದರಿಂದ ಬೇಸತ್ತ ಯುವ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ (suicide) ಘಟನೆ ಶೃಂಗೇರಿ ತಾಲೂಕಿನಲ್ಲಿ ವರದಿಯಾಗಿದೆ.
ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮ ಸಮೀಪದ ಕೊಡತಲು ಗ್ರಾಮದ ನಿವಾಸಿ ಅಭಿಲಾಷ್(35) ಆತ್ಮಹತ್ಯೆಗೆ ಶರಣಾದ ಯುವ ರೈತನಾಗಿದ್ದು, ಇವರು ಶೃಂಗೇರಿ ಪಟ್ಟಣದ ಖಾಸಗಿ ಬ್ಯಾಂಕ್ಒಂದರಲ್ಲಿ 3.50 ಲಕ್ಷ ರೂ. ಸಾಲ ಮಾಡಿದ್ದರೆಂದು ತಿಳಿದು ಬಂದಿದೆ.
ಅಭಿಲಾಷ್ ಅವರು ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು, ಇದಕ್ಕಾಗಿ ಬ್ಯಾಂಕ್ ಸೇರಿದಂತೆ ಹಲವೆಡೆ ಕೈ ಸಾಲ ಮಾಡಿಕೊಂಡಿದ್ದರೆನ್ನಲಾಗಿದ್ದು, ತಮ್ಮ ಅಡಿಕೆ ತೋಟಕ್ಕೆ ಎಲೆ ಚುಕ್ಕಿ ರೋಗ ಹರಡಿದ್ದರಿಂದ ತೀವ್ರ ನೊಂದಿದ್ದ ಅವರು ಗುರುವಾರ ಬೆಳಗ್ಗೆ ರೋಗ ನಿಯಂತ್ರಣಕ್ಕೆಂದು ಮನೆಯಲ್ಲಿ ತಂದಿಟ್ಟಿದ್ದ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಲೆನಾಡು ಭಾಗದಲ್ಲಿ ಅಡಿಕೆ ಹಳದಿ ರೋಗದಿಂದ ತತ್ತರಿಸಿದ್ದ ರೈತರಿಗೆ ಇತ್ತೀಚೆಗೆ ಅಡಿಕೆ ಎಲೆ ಚುಕ್ಕಿ ರೋಗ ತೀವ್ರ ಆತಂಕ ಮೂಡಿಸಿದೆ. ರೋಗ ಹತೋಟಿಗೆ ಬಾರದಿರುವುದರಿಂದ ಸಾಲ ಸೂಲ ಮಾಡಿ ಅಡಿಕೆ ತೋಟ ಮಾಡಿರುವ ರೈತರು ದಿಕ್ಕುತೋಚದಂತಾಗಿದ್ದಾರೆ. ಸರಕಾರ ಕೂಡ ಈ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ನೊಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ... ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಿದ BJP, ಸತೀಶ್ ಜಾರಕಿಹೊಳಿ ಪರ ನಿಲ್ಲದ ಕಾಂಗ್ರೆಸ್: ಡಿಎಸ್ಎಸ್ ಖಂಡನೆ