ಡಿ.6ರಂದು ಬೆಂಗಳೂರಿನಲ್ಲಿ ‘ದಲಿತ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ

ಬೆಂಗಳೂರು, ನ. 10: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣದಿನದ ಅಂಗವಾಗಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.6ರಂದು ‘ದಲಿತ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತಿಳಿಸಿದೆ.
ಗುರುವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಹಾಗೂ ಬಿಜೆಪಿ ಪಕ್ಷವು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಹಾಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳ ರಕ್ಷಣೆಗಾಗಿ ಸಮಾವೇಶವನ್ನು ಆಯೋಜನೆ ಮಾಡಲಾಗಿದೆಎಂದರು.
ಸಮಾವೇಶದ ರೂಪು ರೇಷೆಗಳ ಕುರಿತು ಈಗಾಗಲೇ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲಾಗಿದೆ.ರಾಜ್ಯದಲ್ಲಿ ಬಿಜೆಪಿ ಪ್ರಭುತ್ವದ ವಿರುದ್ಧ ಬಹುದೊಡ್ಡ ರೂಪದಲ್ಲಿ ಪ್ರತಿರೋಧದ ಅಲೆ ಎದ್ದಿದೆ. ಈ ಸಮಾವೇಶವು ಇಡೀ ದಲಿತ ಚಳವಳಿಗೆ ಮರುಹುಟ್ಟು ಮತ್ತು ಹೊಸ ದಿಕ್ಕನ್ನು ತೋರಿಸುತ್ತದೆ. ರೈತ ಸಂಘ, ಕಾರ್ಮಿಕ ಸಂಘಗಳೂ ಸಮಾವೇಶಕ್ಕೆ ಬೆಂಬಲ ನೀಡಿವೆ ಎಂದರು.
ರಾಜ್ಯರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಶುರು ಮಾಡಿ, ಕೇಂದ್ರದ ಕೃಷಿ ವಿರೋಧಿ, ಕಾರ್ಮಿಕ ವಿರೋಧಿ ಕಾನೂನು ಮತ್ತು ನೀತಿಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಬೇಕಿದೆ. ಮುಂದೆ ರಾಜಕೀಯವಾಗಿಯೂ ಕೋಮುವಾದಿ ಶಕ್ತಿಗಳನ್ನು ಹೇಗೆ ಹಿಮ್ಮೆಟ್ಟಿಸಬೇಕು. ಹಾಗಾಗಿ ನಮ್ಮ ನಡುವಿನ ವೈರುದ್ಯಗಳನ್ನು ಮರೆತು ಅನಿವಾರ್ಯವಾಗಿ ಇಂದು ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.
ದಲಿತ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಆಡಳಿತದಲ್ಲಿ ಜನ ವಿರೋಧಿ ಕಾಯ್ದೆ ಮತ್ತು ನೀತಿಗಳನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವ, ಸಂವಿಧಾನ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಹೊಸಕಿ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್.ವೆಂಕಟೇಶ್, ಡಾ.ಡಿ.ಜಿ.ಸಾಗರ್, ಎನ್.ಮುನಿಸ್ವಾಮಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಎಂ ಸೋಮಶೇಖರ್, ಗುರುಪ್ರಸಾದ್ಕೆರಗೋಡು ಮತ್ತಿತರರು ಉಪಸ್ಥಿತರಿದ್ದರು.
''ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲೇ ದೇಶ ಎಲ್ಲ ರಂಗದಲ್ಲಿಯೂ ಅಧಃಪತನದತ್ತ ಸಾಗುತ್ತಿದೆ.ರಾಜ್ಯ ಸೇರಿ ಇಡೀ ದೇಶದಲ್ಲಿ ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಜನರ ಭಾವನೆಗಳನ್ನು ಕೆರಳಿಸಲಾಗಿದೆ. ಕೇಂದ್ರ ಬಿಜೆಪಿ ಸರಕಾರವು ನೋಟುಗಳ ಅಮಾನ್ಯೀಕರಣ ಮಾಡಿದ ಬಳಿಕ ದೇಶದಲ್ಲಿ ಆರ್ಥಿಕತೆ ಏನಾಗಿದೆ ಎಂಬುದನ್ನು ಚರ್ಚೆ ಮಾಡಲು ಸಿದ್ಧವಿಲ್ಲ''
- ಮಾವಳ್ಳಿ ಶಂಕರ್, ದಲಿತ ಮುಖಂಡ







