ಮೂಡುಬಿದಿರೆ: ಲೈಂಗಿಕ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಆರೋಪಿ ಸೆರೆ

ಮೂಡುಬಿದಿರೆ: ಇಲ್ಲಿನ ಖಾಸಗಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಗೆ ಅದೇ ಕಾಲೇಜಿನ ಮಾಜಿ ನೌಕರನೊಬ್ಬನ ಲೈಂಗಿಕ ಕಿರುಕುಳ ಕಾರಣ ಎಂದು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಟೆಬಾಗಿಲಿನ ಶ್ರೀಧರ್ ಪುರಾಣಿಕ್ ಎಂದು ಪೊಲೀಸರು ತಿಳಿಸಿದ್ದಾರೆ.
ಪಡುಕೊಣಾಜೆ ಗ್ರಾಮದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದ ಬಾಲಕಿಗೆ ಮಂಗಳವಾರ ಕಿವಿ ನೋವು ಉಂಟಾಗಿ ಮನೆಗೆ ಹೋಗುತ್ತೇನೆ ಎಂದಿದ್ದಳು. ಕಾಲೇಜಿನವರು ಮನೆಯವರಿಗೆ ವಿಷಯ ತಿಳಿಸಿದಾಗ ಪರಿಚಯಸ್ಥ ಶ್ರೀಧರ್ ಪುರಾಣಿಕ್ ಜತೆ ಮನೆಗೆ ಕಳುಹಿಸಿಕೊಡುವಂತೆ ಹೇಳಿದ್ದರೆನ್ನಲಾಗಿದೆ. ಕಾರಿನಲ್ಲಿ ಬರುವಾಗ ಶ್ರೀಧರ್ ಪುರಾಣಿಕ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮನೆ ಹತ್ತಿರ ಬಂದರೂ ಆಕೆಯನ್ನು ಕಾರಿನಿಂದ ಇಳಿಯಲು ಬಿಡಲಿಲ್ಲ ಎಂದು ದೂರಲಾಗಿದೆ.
ಆದರೆ ನಡೆದ ವಿಷಯವನ್ನು ಆಕೆ ಮನೆಗೆ ತಿಳಿಸಿರಲಿಲ್ಲ. ಮರುದಿನ ಬೆಳಗ್ಗೆ ಮನೆ ಹತ್ತಿರದ ಹಾಡಿಯಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ದೂರಲಾಗಿದೆ. ಡೆತ್ನೋಟ್ ನಲ್ಲಿ ಆರೋಪಿಯ ಹೆಸರು ಬರೆದು ತನಗೆ ಲೈಂಗಿಕ ಕಿರುಕುಳವಾಗಿರುವುದನ್ನು ಉಲ್ಲೇಖಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಬಾಲಕಿಯ ಚಿಕ್ಕಮ್ಮ ಆರೋಪಿ ಶ್ರೀಧರ್ ಪುರಾಣಿಕ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದೇ ಪರಿಚಯದಲ್ಲಿ ಆರೋಪಿ ವಿದ್ಯಾರ್ಥಿನಿಯನ್ನು ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಶಾಲಾ ದಾಖಲಾತಿ ವೇಳೆ ಬಾಲಕಿಯ ಫೀಸ್ ಕೂಡ ಆರೋಪಿ ಕಟ್ಟಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಎಸಿಪಿ ಮಹೇಶ್ ಕುಮಾರ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.