BJP ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ನ. 11: ‘ಪ್ರಧಾನಿ ಬಂದಾಗ ರಸ್ತೆ ಗುಂಡಿಗಳನ್ನು ಹೇಗೆ ಮುಚ್ಚಲಾಗಿದೆಯೋ, ಅದೇ ರೀತಿ ಈ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ತಮ್ಮ ನಾಯಕರಿಗೆ ಸಂದೇಶ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರು ಬರೆದ ಪತ್ರಕ್ಕೆ ಪ್ರಧಾನಿ ಮೋದಿ ಅವರು ಉತ್ತರ ನೀಡುತ್ತಾರೆಂಬ ವಿಶ್ವಾಸವಿದೆ. ಈ ಮಧ್ಯೆ ಮತ್ತೊಬ್ಬರು ಲಂಚದ ಕಿರುಕುಳ ತಾಳಲಾರದೆ ದಯಾಮರಣಕ್ಕೆ ಅರ್ಜಿ ಹಾಕಿರುವ ವಿಚಾರ ತಿಳಿದಿದೆ. ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕಿದೆ’ ಎಂದು ಸಲಹೆ ನೀಡಿದೆ.
‘ಪ್ರಧಾನಿ ಉತ್ತರ ನೀಡದಿದ್ದರೆ, ಮುಂದಿನ ಹೋರಾಟದ ಬಗ್ಗೆ ಮುಂದೆ ತಿಳಿಸುತ್ತೇನೆ. ಕೇಳಿದ ತಕ್ಷಣ ನಾವು ಹೋರಾಟ ಯೋಜನೆ ರೂಪಿಸಲು ಆಗುವುದಿಲ್ಲ. 5 ನಿಮಿಷದಲ್ಲಿ ಹೇಗೆ ಊಟ ಸಿದ್ಧಮಾಡಲು ಆಗುವುದಿಲ್ಲವೋ ಹಾಗೆ ಇದಕ್ಕೂ ಸಮಯ ಬೇಕಾಗುತ್ತದೆ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
‘ನಾನು ಈ ಹಿಂದೆಯೇ ಕೆಂಪೇಗೌಡರ ಪ್ರತಿಮೆಯನ್ನು ಸರಕಾರ ನಿರ್ಮಾಣ ಮಾಡುವ ಅಗತ್ಯವಿಲ್ಲ. ವಿಮಾನ ನಿಲ್ದಾಣ ಆಡಳಿತ ಮಂಡಳಿಯವರೇ ಮಾಡಬಹುದು. ಅವರಿಗೆ 50-60 ಕೋಟಿ ರೂ.ವೆಚ್ಚ ಮಾಡುವುದು ದೊಡ್ಡ ವಿಚಾರವಲ್ಲ ಎಂದು ಹೇಳಿದ್ದೆ. ಇವರು ಅವರದೇ ಆದ ಲೆಕ್ಕಾಚಾರ ಹಾಕಿಕೊಂಡು ಮಾಡುತ್ತಿದ್ದಾರೆ. ಸರಕಾರದ ಹಣ ಹೇಗೆ ಉಳಿಸಬೇಕು, ಕಾಮಗಾರಿ ಹೇಗೆ ಮಾಡಿಸಬೇಕು ಎಂಬ ಬಗ್ಗೆ ಸಾಮಾನ್ಯ ಪರಿಜ್ಞಾನ ಇರಬೇಕು. ಇವರು ತಾವು ಹೆಸರು ಮಾಡಿಕೊಳ್ಳಲು ಈ ರೀತಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
‘ಪ್ರಧಾನಿ ಮೋದಿ ಹಾಗೂ ಪಕ್ಷದ ವೈಭವೀಕರಣಕ್ಕೆ ಯಾವ ರೀತಿ ಹಣ ಖರ್ಚು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಅವರು ಯಾವ ರೀತಿಯಾದರೂ ಜನರನ್ನು ಕರೆದುಕೊಂಡು ಹೋಗಲಿ, ಆದರೆ ಇವರನ್ನು ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದಾರೆ. ಸರಕಾರದವರು ತಮ್ಮ ನಾಯಕರ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು, ಜನರ ಅನುಕೂಲಕ್ಕಾಗಿ ಮಾಡಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದರು.