ರಸ್ತೆ ಅಪಘಾತ: ಮರಾಠಿ ನಟಿ ಕಲ್ಯಾಣಿ ಕುರಾಲೆ ಮೃತ್ಯು
ಮುಂಬೈ: ಟಿವಿ ಕಾರ್ಯಕ್ರಮ ತುಜ್ಯಾತ್ ಜೀವ್ ರಂಗ್ಲಾ ಹಾಗೂ ಧಕ್ಕಾಂಚ ರಾಜಾ ಜ್ಯೋತಿಬಾ ಮೂಲಕ ಖ್ಯಾತಿ ಪಡೆದಿರುವ ಮರಾಠಿ ನಟಿ ಕಲ್ಯಾಣಿ ಕುರಾಲೆ ಜಾಧವ್ (Marathi actress Kalyani Kurale Jadhav) ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.
ಕಲ್ಯಾಣಿ ಕುರಾಲೆ ತನ್ನ ರೆಸ್ಟೋರೆಂಟ್ ಅನ್ನು ಬಂದ್ ಮಾಡಿ ಮನೆಗೆ ಹೋಗುತ್ತಿದ್ದಾಗ ಕೊಲ್ಹಾಪುರ ರಸ್ತೆಯಲ್ಲಿ ಡಂಪರ್ ವಾಹನ ಢಿಕ್ಕಿಯಾಗಿದೆ. ಕಲ್ಯಾಣಿ ಅವರ ರೆಸ್ಟೋರೆಂಟ್ ಹಲೊಂದಿ ಸಾಂಗ್ಲಿ ಫಾಟಾದಲ್ಲಿದೆ. ರೆಸ್ಟೋರೆಂಟ್ ಸಮೀಪವೇ ಅಪಘಾತ ನಡೆದಿದೆ.
ಕಲ್ಯಾಣಿ ಅವರು ಕೆಲವೇ ದಿನಗಳ ಹಿಂದೆ ಕೊಲ್ಹಾಪುರದಲ್ಲಿ ರೆಸ್ಟೋರೆಂಟ್ ವೊಂದನ್ನು ತೆರೆದಿದ್ದರು. ಕಲ್ಯಾಣಿ ತನ್ನ ಹೊಟೇಲ್ ವ್ಯವಹಾರ ಹಾಗೂ ಶೂಟಿಂಗ್ ಅನ್ನು ನಿಭಾಯಿಸುತ್ತಿದ್ದರು.
ನಿಧನರಾಗುವ 22 ಗಂಟೆಗಳ ಮೊದಲು ಕಲ್ಯಾಣಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು. ಸಲಾಡ್ ತಿನ್ನುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. 'ಹೋ ನಾಹೋ' ಗೀತೆಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದರು.
ಕೊಲ್ಹಾಪುರ ಮೂಲದ ಕಲ್ಯಾಣಿ ತನ್ನ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದರು.