ಕಟ್ಟುಕಥೆಗಳನ್ನು ಕಟ್ಟಿ ನೆಹರು ಚಾರಿತ್ರ್ಯ ಹರಣ ಮಾಡಲಾಗುತ್ತಿದೆ: ಡಾ.ಗಣನಾಥ ಎಕ್ಕಾರು
ಮಕ್ಕಳ ನಾಟಕ ಹಬ್ಬ ಉದ್ಘಾಟನೆ

ಉಡುಪಿ: ಕಳೆದ ಎರಡು ದಶಕಗಳಿಂದ ನೆಹರೂ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಸ್ವಾತ್ರಂತ್ಯ ಹೋರಾಟ, ದೇಶದ ಪ್ರಜಾ ತಂತ್ರ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅವರ ಕೊಡುಗೆ ಯನ್ನು ಅರ್ಥ ಮಾಡಿಕೊಳ್ಳದೆ ಕಟ್ಟುಕಥೆಗಳನ್ನು ಕಟ್ಟಿ ಚಾರಿತ್ರ್ಯ ಹರಣ ಮಾಡುತ್ತಿರುವ ಹಂತಕಕ್ಕೆ ಬಂದಿರುವುದು ದುರಂತ ಎಂದು ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ ವತಿಯಿಂದ ನೆಹರೂ ಜಯಂತಿ ಪ್ರಯುಕ್ತ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಮಕ್ಕಳ ನಾಟಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಮಹಾನ್ ದಾರ್ಶನಿಕರ ಹಾಗೂ ಮಹಾಪುರುಷರ ಬಗ್ಗೆ ಮಕ್ಕಳು ವಾಸ್ತವ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಗಾಂಧಿಜೀ, ನೆಹರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಾಸ್ತಾವ ಮಾಹಿತಿಯನ್ನು ಮಕ್ಕಳಿಗೆ ನೀಡ ಬೇಕಾಗಿದೆ. ಮಕ್ಕಳಿಗೆ ವೈಚಾರಿಕ ಮಾಹಿತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಗಾಂಧೀ, ನೆಹರು ಅವರ ಬಗ್ಗೆ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಅಪಪ್ರಚಾರಗಳನ್ನು ಜನ ಬಲವಾಗಿ ನಂಬುತ್ತಿದ್ದಾರೆ. ನೆಹರು ಮೂಲವನ್ನು ತಿಳಿದುಕೊಂಡು ಸತ್ಯದ ಜೊತೆ ಒಪ್ಪಿಕೊಳ್ಳಬೇಕಾಗಿದೆ. ಈ ದೇಶಕ್ಕೆ ಸಮಾಜವಾದ ನೆಲೆಯನ್ನು ಒದಗಿಸಿದವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿದವರು ಹಾಗೂ ವಿಜ್ಞಾನ ಹಾಗೂ ವೈಜ್ಞಾನಿಕತೆಯನ್ನು ಈ ನೆಲದಲ್ಲಿ ಬಿತ್ತಿದವರು ನೆಹರು. ಆದರೆ ಇಂದು ದೇಶದ ಅಭಿವೃದ್ಧಿ ಕೇವಲ ಕೆಲವು ದಶಕಗಳಿಂದ ಆಗುತ್ತಿದೆ ಎಂಬ ತಪ್ಪು ಕಲ್ಪನೆ ಹುಟ್ಟು ಹಾಕಲಾಗುತ್ತಿದೆ ಎಂದು ಅವರು ದೂರಿದರು.
ಸ್ವಾತಂತ್ರ್ಯ ದೊರೆತ ನಂತರ ದೇಶ ವಿಭಜನೆ, ನಿರಾಶ್ರಿತರ ಸಮಸ್ಯೆ, ಕೋಮು ಗಲಭೆ ವಿಚಾರಗಳ ಮಧ್ಯೆ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ನೆಹರೂ ಅಂತಹ ಮಾನವತವಾದಿ, ಪ್ರಜಾಪ್ರಭುತ್ವವಾದಿ, ಸಮಾಜವಾದಿ ನಾಯಕನೇ ಅಗತ್ಯ ಇತ್ತು. ಇಂತಹ ನಾಯಕರಿಂದಾಗಿಯೇ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಕಾಪಾಡಿಕೊಂಡು ಬಂದಿದೆ. ಇದಕ್ಕೆ ನೆಹರೂ ಜೊತೆ ಬಿ.ಆರ್.ಅಂಬೇಡ್ಕರ್ ಕೂಡ ಕಾರಣ. ಆದುದರಿಂದ ನೆಹರು ಕೊಡುಗೆಯನ್ನು ವಾಸ್ತಾವ ವೈಚಾರಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮಾತನಾಡಿ, ಮಕ್ಕಳಲ್ಲಿ ಕಲೆ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಲು ಇಂತಹ ಹಬ್ಬಗಳು ಸಹಕಾರಿಯಾಗಿದೆ. ಮನುಷ್ಯ ಸಾಂಸ್ಕೃತಿಕವಾಗಿದ್ದರೆ ಮಾತ್ರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲು ಹಾಗೂ ವಿಶಾಲ ಮನೋಭಾವ ಹೊಂದಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ರಥಬೀದಿ ಗೆಳೆಯರು ಮಾಜಿ ಅಧ್ಯಕ್ಷ ಪ್ರೊ.ಮುರಳೀಧರ್ ಉಪಾಧ್ಯಾಯ, ಉಪಾಧ್ಯಕ್ಷ ಯು.ಸಿ.ನಿರಂಜನ್ ಉಪಸ್ಥಿತರಿದ್ದರು. ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಇದರ ಕೊರಗ ಮಕ್ಕಳ ರಂಗ ಶಿಬಿರದ ವಿದ್ಯಾರ್ಥಿಗಳಿಂದ ‘ಹುಭಾಶಿಕ’, ಕಟಪಾಡಿ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಡಾರ್ವಿನ್ ಟು ಗಾಂಧಿ’, ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಕ್ರಾಮಿಕ ಅವಾಂತರ, ಹಕ್ಲಾಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪಂಚವಟಿಯ ಮಾಯಮುಖಗಳು ನಾಟಕ ಪ್ರದರ್ಶನಗೊಂಡವು.
ಸಮಾನತೆ ಸ್ವಾತಂತ್ರ್ಯ ಹಾಗೂ ಭಾತೃತ್ವದ ಮೌಲ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಾಯಕ ನೆಹರು. ಈ ಮೌಲ್ಯಗಳನ್ನು ವೈಚಾರಿಕ ಮತ್ತು ವಾಸ್ತವದ ನೆಲೆಯಲ್ಲಿ ಅನುಷ್ಠಾನ ಮಾಡಲು ಅವರಿಗೆ ಸಾಧ್ಯವಾಯಿತು. ಈವರೆಗೂ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯದ ಉಳಿದುಕೊಂಡ ಬರಲು ನೆಹರು ಪ್ರಧಾನ ಕಾರಣ. ವೈಜ್ಞಾನಿಕ ಹಾಗೂ ವೈಚಾರಿಕ ಪ್ರಗತಿಗೆ ಬೇಕಾದ ಹೊಸ ಆಯಾಮವನ್ನು ತಮ್ಮ ಆಡಳಿತದ ಮೂಲಕ ಅನುಷ್ಠಾನಗೊಳಿ ಸುವ ಕಾರ್ಯವನ್ನು ನೆಹರು ಮಾಡಿದ್ದರು.
-ಡಾ.ಗಣನಾಥ ಎಕ್ಕಾರು, ಜಾನಪದ ವಿದ್ವಾಂಸ







