ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ; ಜಾತಿ ಆಧಾರಿತ ಮೀಸಲಾತಿ ರದ್ದಾಗಲು ಬುನಾದಿ: ದಿನೇಶ್ ಅಮಿನ್ಮಟ್ಟು
ದಾವಣಗೆರೆ : 'ಅರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ಶೇ 10 ರಷ್ಟು ಮೀಸಲಾತಿ ಮುಂದಿನ ದಿನಗಳಲ್ಲಿ “ಜಾತಿ ಆಧಾರಿತ ಮೀಸಲಾತಿ'' ರದ್ದು ಮಾಡಲಿಕ್ಕೆ ಬುನಾದಿಯಾಗಲಿದೆ' ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ ರವಿವಾರ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ `ಬಿ. ಬಸವಲಿಂಗಪ್ಪ: ನೂರರ ನೆನಪು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
''ಮೇಲ್ಜಾತಿ ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಾರದು ಎಂದು ಪ್ರಶ್ನೆ ಕೇಳುವವರಿದ್ದಾರೆ. ಅದು ತಪ್ಪಲ್ಲ. ದೇವರಾಜ ಅರಸು ಶೇ 5 ರಷ್ಟು ಮೀಸಲಾತಿ ಒದಗಿಸಿದ್ದರು. ಅದರೆ, ಅದು ಕೋರ್ಟ್ ನಿಲ್ಲಲಿಲ್ಲ. ಇಲ್ಲಿ ಪ್ರಶ್ನೆಯೆಂದರೆ ಐವರು ನ್ಯಾಯಾಧೀಶರಲ್ಲಿ ಇಬ್ಬರು ಶೇ 10 ರಲ್ಲಿ ಒಬಿಸಿ, ಎಸ್ಸಿ-ಎಸ್ಟಿಗಳನ್ನು ಒಳಗೊಂಡಿಲ್ಲ ಎನ್ನುವ ಪ್ರಶ್ನೆ ಇಟ್ಟಿದ್ದಾರೆ. ಸದ್ಯ ನ್ಯಾಯಾಧೀಶರ ನಿಗಾದಲ್ಲಿದೆ. ಇದು ಮುಂದಿನ ದಿನಗಳಲ್ಲಿ ಚರ್ಚೆ ನಡೆಯಲಿದೆ. ಇವತ್ತಿನ ಪ್ರಭುತ್ವದ ಮುಖ್ಯ ಉದ್ದೇಶ ಸಂವಿಧಾನದ ದುರ್ಬಲಗೊಳಿಸುವುದಾಗಿದೆ. ಅದರೆ, ಸಂವಿಧಾನದ ರಕ್ಷಣೆಯಾಗದಿದ್ದರೆ ನಾವು ಬೀದಿಯಲ್ಲಿ ನಿಲ್ಲಬೇಕಾಗುತ್ತದೆ'' ಎಂದು ಹೇಳಿದರು.
''ಸಂವಿಧಾನದ ದುರ್ಬಲಗೊಳಿಸಲು ಅದರ ಒಂದು ರೆಕ್ಕೆಗಳನ್ನು ತೆಗೆದರೆ ಸಾಕು ದುರ್ಬಲಗೊಳ್ಳಲಿದೆ. ಇವತ್ತಿನ ಸುಪ್ರೀಂಕೋರ್ಟ್ನ ತೀರ್ಪು ನಮ್ಮ ಚೌಕಟ್ಟಿಗೆ ಹೊಡೆದ ಮೊದಲ ಮೊಳೆ. ಮೀಸಲಾತಿಯಡಿಯಲ್ಲಿ ಇದುವರೆಗೂ ಸಿಕ್ಕ ಉದ್ಯೋಗ ಶೇ 2 % ಮಾತ್ರ. ಶೇ 98 ರಷ್ಟು ಉದ್ಯಮದವರ ಕೈಯಲ್ಲಿದೆ. ಅದ್ದರಿಂದ ಡಾ.ಬಿ.ಆರ್.ಅಂಬೇಡ್ಕರ, ಬಸವಲಿಂಗಪ್ಪ ಅವರ ಹೋರಾಟಗಳನ್ನು ಜೀವಂತವಾಗಿರಿಸಬೇಕಾಗುತ್ತದೆ. ನಮಗೆ ಅಂಬೇಡ್ಕರ ಅಂದರೆ ಜ್ಞಾನದ ಬೆಳಕು ಅವರ ಹೋರಾಟಗಳು ನಮಗೆ ಸ್ಟೂರ್ತಿಯಾಗಬೇಕು'' ಎಂದರು.
''ಹಿಂದೂ ಎನ್ನುವ ಪರ್ಷಿಯನ್ ಭಾಷೆಯಿಂದ ಬಂದಿರುವುದು ಎಂದು ಎಲ್ಲರಿಗೂ ಗೊತ್ತಿದೆ. ಅದರೆ, ಶಾಸಕ ಸತೀಶ ಜಾರಕಿಹೊಳಿಯವರು ಹಿಂದೂ ಎನ್ನುವ ಪದದ ಕುರಿತು ಆಡಿದ ಮಾತು ದೊಡ್ಡ ಸುದ್ದಿಯಾಗಿತ್ತು. ಅದರೆ, ಅವರಿಗೆ ಯಾರು ಸಹಕಾರ ನೀಡಲಿಲ್ಲ'' ಎಂದು ಹೇಳಿದರು.
''ಮಾಜಿ ಸಚಿವ ಬಿ.ಬಸವಲಿಂಗಪ್ಪನವರು ಅನುಕೂಲಸ್ಥ ಕುಟುಂಬದಲ್ಲಿ ಬೆಳೆದರೂ ಕೂಡ ತುಳಿತಕ್ಕೊಳಗಾಗಿರುವ ತನ್ನ ಸಮುದಾಯದ ಬಗ್ಗೆ ಯೋಚಿಸಿದವರು. ಅವರು ಮನಸ್ಸು ಮಾಡಿದರೆ ಉತ್ತಮ ಸಂಪಾದನೆ ಮಾಡಿಕೊಂಡು ಜೀವನ ಸಾಗಿಸಬಹುದಿತ್ತು. ಆದರೆ ಹಾಗೆ ಮಾಡದೆ, ತನ್ನ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು. ಅಂಬೇಡ್ಕರ್ ರೀತಿಯ ಚಿಂತನೆ ಇಟ್ಟುಕೊಂಡಿದ್ದರು. ಇಂತಹವರ ಬದುಕು, ಸಾಧನೆ ವಿವರಿಸುವ ಒಂದೂ ಪುಸ್ತಕವಿಲ್ಲ. ಅವರ ನೆನಪುಗಳು ಮಾಸುವ ಮುನ್ನ ಪುಸ್ತಕ ಹೊರತರುವ ಕೆಲಸ ಮಾಡಬೇಕಿದೆ. ಈ ರೀತಿಯ ರೋಲ್ ಮಾಡೆಲ್ಗಳನ್ನು ನಿರ್ಲಕ್ಷ್ಯ ಮಾಡಬಾರದು'' ಎಂದರು.
''ಬಸವಲಿಂಗಪ್ಪ ಒಬ್ಬ ಸಮರ್ಥ ಸಚಿವ ಎಂಬುದು ಸ್ವತಃ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಗೊತ್ತಿತ್ತು. ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳುವ ಮನಸೂ ಅವರಿಗಿತ್ತು. ಆದರೆ `ಬೂಸಾ' ಚಳವಳಿಗೆ ಸಂಬಂಸಿದಂತೆ ಬಸವಲಿಂಗಪ್ಪ ವಿರುದ್ಧ ಭುಗಿಲೆದ್ದ ವಿರೋಧ ಹಾಗೂ ಸರಕಾರದ ಭಾಗವಾಗಿದ್ದ ಸವರ್ಣೀಯ ಸಚಿವರು, ಜನಪ್ರತಿನಿಗಳು ತಿರುಗಿಬಿದ್ದ ಕಾರಣಕ್ಕೆ ಅನಿವಾರ್ಯವಾಗಿ ಅವರಿಂದ ರಾಜೀನಾಮೆ ಪಡೆದರು'' ಎಂದು ಹೇಳಿದರು.
''70-80ರ ದಶಕದ ನಡುವಿನ 10 ವರ್ಷಗಳ ಕಾಲಘಟ್ಟವು ಚಳವಳಿಗಳ ಸುವರ್ಣ ಯುಗವಾಗಿತ್ತು. ಅದಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ದೇವರಾಜ ಅರಸು ಹಾಗೂ ಬಿ.ಬಸವಲಿಂಗಪ್ಪ. ಅಂತಹವರು ನಮಗೆ ಪ್ರೇರಣೆಯಾಗಬೇಕು. ಪ್ರಸ್ತುತ ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸದೆ ಮೌನವಾಗಿರುವುದು ಅಪರಾಧ. ಅನ್ಯಾಯದ ವಿರುದ್ಧ ಸುಮ್ಮನಿರುವುದನ್ನು ಸಹಿಸಲಾಗದು'' ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಡಾಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, 'ಒಬ್ಬ ಸಂಪುಟ ದರ್ಜೆ ಸಚಿವ ಎಂದರೆ ಹೇಗಿರಬೇಕು, ಅವರ ನಡೆ, ಕಾರ್ಯ ವೈಖರಿ ಹಾಗೂ ಜನಪರ ಬದ್ಧತೆ ಯಾವರೀತಿ ಇರಬೇಕು ಎಂಬ ವಿಷಯದಲ್ಲಿ ದಿ ಬಿ. ಬಸವಲಿಂಗಪ್ಪ, ಇಂದಿನ ಜನಪ್ರತಿನಿಗಳು, ಸಚಿವರಿಗೆ ಮಾದರಿಯಾಗಿ ನಿಲ್ಲುತ್ತಾರೆ' ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ, ಎ.ಬಿ.ರಾಮಚಂದ್ರಪ್ಪ, ಪತ್ರಕರ್ತ ಬಿ.ಚಂದ್ರೇಗೌಡ್, ದಾದಾಪೀರ್ ನವೀಲೆಹಾಳ್ ಸೇರಿದಂತೆ ಇತರರು ಇದ್ದರು.