ಈಡಿ ವಿಚಾರಣೆಗೆ ಹಾಜರಾದ ಡಿ.ಕೆ.ಶಿವಕುಮಾರ್
![ಈಡಿ ವಿಚಾರಣೆಗೆ ಹಾಜರಾದ ಡಿ.ಕೆ.ಶಿವಕುಮಾರ್ ಈಡಿ ವಿಚಾರಣೆಗೆ ಹಾಜರಾದ ಡಿ.ಕೆ.ಶಿವಕುಮಾರ್](https://www.varthabharati.in/sites/default/files/images/articles/2022/11/23/356391-1669182461.jpg)
ಬೆಂಗಳೂರು, ನ.14: ನ್ಯಾಷನಲ್ಹೆರಾಲ್ಡ್ ಪ್ರಕರಣ ಸಂಬಂಧ ಹೊಸದಿಲ್ಲಿಯ ಜಾರಿ ನಿರ್ದೇಶನಾಲಯ (ಈಡಿ) ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾದರು ಎಂದು ವರದಿಯಾಗಿದೆ.
ಎರಡನೇ ಬಾರಿಗೆ ಸಮನ್ಸ್ ನೀಡಿದ್ದರಿಂದ ಮಧ್ಯಪ್ರದೇಶ ಉಜ್ಜಯಿನಿಯಲ್ಲಿದ್ದ ಶಿವಕುಮಾರ್ ನೇರವಾಗಿ ಹೊಸದಿಲ್ಲಿಗೆ ಆಗಮಿಸಿ ಈಡಿ ಮುಂದೆ ವಿಚಾರಣೆ ಎದುರಿಸಿದರು ಎನ್ನಲಾಗಿದೆ.
ಪೂರ್ವ ನಿಗದಿತ ಕಾರ್ಯಕ್ರಮಗಳಿರುವ ಕಾರಣ 3 ವಾರಗಳ ಸಮಯ ಕೇಳಿದ್ದ ಶಿವಕುಮಾರ್ ಅವರಿಗೆ ಮತ್ತೆ ಈಡಿ ತುರ್ತು ಸಮನ್ಸ್ ನೀಡಿದ್ದ ಕಾರಣ ಅವರು ವಿಚಾರಣೆಗೆ ಹಾಜರಾದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಮತ್ತೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ನಾನು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಸನ್ನಿಧಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಮೊದಲ ಸಮನ್ಸ್ ಜಾರಿ ಮಾಡಿದಾಗ ಪೂರ್ವನಿಗದಿತ ಕಾರ್ಯಕ್ರಮ ಕಾರಣ ಸಮಯಾವಕಾಶ ಕೇಳಿದ್ದೆ. ಅಲ್ಲದೇ, ಪ್ರಕರಣ ಸಂಬಂಧ ಉತ್ತರವೂ ನೀಡಿದ್ದೆ. ಆದರೆ, ಈಡಿ ಇದಕ್ಕೆ ತೃಪ್ತವಾಗದೇ ವಿಚಾರಣೆ ಎದುರಿಸಲು ಮತ್ತೆ ಕರೆದಿದೆ. ಪ್ರಕರಣದಲ್ಲಿ ಮುಚ್ಚಿಡಲು ಏನೂ ಇಲ್ಲ. ದತ್ತಿ ಕೆಲಸಕ್ಕಾಗಿ ಹಣ ನೀಡಿದ್ದೇವೆ. ಈ ಬಗ್ಗೆಸೂಕ್ತ ಉತ್ತರ ನೀಡಲಾಗುವುದು ಎಂದು ಅವರು ತಿಳಿಸಿದರು.