'ನಂದಿನಿ' ಹಾಲಿನ ದರ ಏರಿಕೆಗೆ ತಾತ್ಕಾಲಿಕ ತಡೆ: ನ.20ರ ನಂತರ ತೀರ್ಮಾನ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ನ. 14: ‘ನಂದಿನಿ’ ಬ್ರ್ಯಾಂಡ್ನ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ.ಗಳನ್ನು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ನಾಳೆ(ನ.15)ಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಪ್ರಕಟಿಸಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)ಅವರ ಸೂಚನೆ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
'ಹಾಲಿನ ದರ ಏರಿಕೆ ಬಗ್ಗೆ ನ.20ರ ನಂತರ ಚರ್ಚಿಸಿ ತೀರ್ಮಾನ ಮಾಡಲಾಗುವುದು’ ಎಂದಿರುವ ಬಸವರಾಜ ಬೊಮ್ಮಾಯಿ ಅವರು, ‘ಹಲವು ತಿಂಗಳಿನಿಂದ ಹಾಲಿನ ದರ ಏರಿಕೆ ಸಂಬಂಧ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೆ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಅಧ್ಯಕ್ಷರು ಹಾಗೂ ಕೆಎಂಎಫ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ನಂದಿನಿ’ ಬ್ರ್ಯಾಂಡ್ನ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ.ಗಳನ್ನು ಕೆಎಮ್ ಎಫ್ ಹೆಚ್ಚಳ ಮಾಡಿತ್ತು. ನಂದಿನಿ ಹಾಲಿನ ನೀಲಿ ಪ್ಯಾಕೇಟ್(ಟೋನ್ಡ್ ಹಾಲು) 37ರೂ.ನಿಂದ 40 ರೂ., ಹೋಮೋಜಿನೈಸ್ಡ್ ಟೋನ್ಡ್ ಹಾಲು-38 ರೂ.ನಿಂದ 41 ರೂ. ಗಳಿಗೆ, ಮೊಸರು ಪ್ರತಿ ಕೆಜಿಗೆ 45ರಿಂದ 48 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಆದರೆ, ಸಿಎಂ ನಿರ್ದೇಶನದ ಹಿನ್ನೆಲೆಯಲ್ಲಿ ದರ ಏರಿಕೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಇದನ್ನೂ ಓದಿ... 'ಸಚಿವರು ಕಾಣೆಯಾಗಿದ್ದಾರೆ' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ : ರೈತನ ಬಂಧನ