ದಿಲ್ಲಿ ಹೊಸಮದ್ಯ ನೀತಿ: ‘ಇಡಿ’ಯಿಂದ ಉದ್ಯಮಿ ಬಂಧನ
![ದಿಲ್ಲಿ ಹೊಸಮದ್ಯ ನೀತಿ: ‘ಇಡಿ’ಯಿಂದ ಉದ್ಯಮಿ ಬಂಧನ ದಿಲ್ಲಿ ಹೊಸಮದ್ಯ ನೀತಿ: ‘ಇಡಿ’ಯಿಂದ ಉದ್ಯಮಿ ಬಂಧನ](https://www.varthabharati.in/sites/default/files/images/articles/2022/11/14/356429-1668446313.jpeg)
ಹೊಸದಿಲ್ಲಿ, ನ. 14: ದಿಲ್ಲಿ ಸರಕಾರದ ಮದ್ಯ ನೀತಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಅನುಷ್ಠಾನ ನಿರ್ದೇಶನಾಲಯ (ಇಡಿ)ವು ಸೋಮವಾರ ವಿಜಯ ನಾಯರ್ (Vijay Nair)ಎಂಬ ಉದ್ಯಮಿಯನ್ನು ಬಂಧಿಸಿದೆ.
ಆಮ್ ಆದ್ಮಿ ಪಕ್ಷ (ಆಪ್)ದ ಸಂವಹನ ಘಟಕದ ಉಸ್ತುವಾರಿಯಾಗಿದ್ದ ನಾಯರ್ರನ್ನು ಸಿಬಿಐ ಸೆಪ್ಟಂಬರ್ನಲ್ಲಿ ಬಂಧಿಸಿತ್ತು. ಅವರ ಜಾಮೀನು ವಿಚಾರಣೆ ನಡೆಯುವುದಕ್ಕೆ ಸ್ವಲ್ಪವೇ ಮುಂಚಿತವಾಗಿ ಅನುಷ್ಠಾನ ನಿರ್ದೇಶನಾಲಯವು ಸೋಮವಾರ ಅವರನ್ನು ಸಿಬಿಐ(CBI) ನಿಂದ ತನ್ನ ವಶಕ್ಕೆ ತೆಗೆದು ಕೊಂಡಿತು.
ಹೈದರಾಬಾದ್ನ ಉದ್ಯಮಿ ಅಭಿಶೇಕ್ ಬೋಯಿನ್ಪಲ್ಲಿ(Abhishek Boinpally) ಜೊತೆಗೆ ನಾಯರ್ರನ್ನು ಬಂಧಿಸಲಾಗಿತ್ತು. ಅಭಿಶೇಕ್ರ ಭಾಗೀದಾರ ಅರುಣ್ ಪಿಳ್ಳೆಯನ್ನು ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ.
ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾನೂನು ನ್ಯಾಯಾಲಯದಲ್ಲಿ ನಾಯರ್ ಮತ್ತು ಬೋಯಿನ್ಪಲ್ಲಿ ಇಬ್ಬರನ್ನೂ ವಶಕ್ಕೆ ನೀಡುವಂತೆ ಅನುಷ್ಠಾನ ನಿರ್ದೇಶನಾಲಯವು ಕೋರಲಿದೆ ಎಂದು ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ಪಿಟಿಐಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐಯ ಮೊದಲ ಮಾಹಿತಿ ವರದಿಯಲ್ಲಿ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ(Manish Sisodi) ಸೇರಿದಂತೆ 15 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮದ್ಯ ನೀತಿಯನ್ನು ಕಳೆದ ವರ್ಷದ ನವೆಂಬರ್ 17ರಂದು ದಿಲ್ಲಿಯಲ್ಲಿ ಜಾರಿಗೊಳಿಸಲಾಗಿತ್ತು. ಬಹಿರಂಗ ಹರಾಜಿನ ಮೂಲಕ 849 ಮದ್ಯ ಪರವಾನಿಗೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು. ಆದಾಗ್ಯೂ, ಮದ್ಯ ನೀತಿಯ ಬಗ್ಗೆ ಸಿಬಿಯ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ್ ಸಕ್ಸೇನ ಆದೇಶಿಸಿದ ಬಳಿಕ, ದಿಲ್ಲಿ ಸರಕಾರವು ಜುಲೈ 30ರಂದು ನೂತನ ಮದ್ಯನೀತಿಯನ್ನು ವಾಪಸ್ ಪಡೆದುಕೊಂಡಿತ್ತು.