ಕೊಡಗಿನ ನಮೃತಾಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ
ಕೆರೆಯಲ್ಲಿ ಮುಳುಗುತ್ತಿದ್ದ ವೃದ್ಧನ ಪ್ರಾಣ ಉಳಿಸಿದ್ದ ಬಾಲಕಿ
![ಕೊಡಗಿನ ನಮೃತಾಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಕೊಡಗಿನ ನಮೃತಾಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2022/11/15/356499-1668516259.png)
ಮಡಿಕೇರಿ ನ.15 : ಕೊಡಗಿನ ಗೋಣಿಕೊಪ್ಪ ಸೀಗೆತೋಡು ನಿವಾಸಿ ಶಬರೀಶ ಹಾಗೂ ಶಾಂತ ದಂಪತಿಯ ಪುತ್ರಿ ನಮೃತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಷ್ಠಿತ ‘ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ’ ಪಡೆದಿದ್ದಾರೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಜವಾಹರ್ ಲಾಲ್ ಬಾಲಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ನಮೃತಾಳಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಸೇರದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವೃದ್ಧನ ಪ್ರಾಣ ಉಳಿಸಿದ್ದ ಬಾಲಕಿ:
ಗೋಣಿಕೊಪ್ಪಲು ಅರ್ವತೋಕ್ಲುವಿನ ಸರ್ವದೈವತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ನಮೃತಾ, 2021ರ ನವೆಂಬರ್ 6ರ ಶನಿವಾರದಂದು ಮಧ್ಯಾಹ್ನ ಎಂದಿನಂತೆ ಕಾಲೇಜು ಮುಗಿಸಿ ಮನೆಕಡೆ ತೆರಳುತ್ತಿದ್ದಾಗ, ಮನೆ ಸಮೀಪದಲ್ಲಿರುವ ಕೆರೆಯಲ್ಲಿ ವೃದ್ಧರೋರ್ವರು ಮುಳುಗುತ್ತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದುದ್ದನ್ನು ಗಮನಿಸಿದ ನಮೃತಾ ಕೆರೆಗೆ ಧುಮುಕಿ ಮುಳುಗುತ್ತಿದ್ದ ವೃದ್ಧನನ್ನು ಸುರಕ್ಷಿತವಾಗಿ ದಡ ಸೇರಿಸುವ ಮೂಲಕ ಜೀವ ಉಳಿಸಿದ್ದಳು. ಈ ಘಟನೆಯನ್ನು ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಮೃತಾ ಹೆಸರನ್ನು ಪ್ರತಿಷ್ಟಿತ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಾಗಿ ಸರಕಾರಕ್ಕೆ ಶಿಫಾರಸು ಮಾಡಿತ್ತು.
ತನಗೆ ಸಿಕ್ಕಿದ ಪ್ರಶಸ್ತಿಯನ್ನು ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಿಗೆ ಹಾಗೂ ತನ್ನ ತಂದೆ, ತಾಯಿಗೆ ಅರ್ಪಿಸುವುದಾಗಿ ನಮೃತಾ ಹೆಮ್ಮೆಯಿಂದ ನುಡಿದಿದ್ದಾರೆ. ತನ್ನ ಮಗಳು ಜೀವವೊಂದನ್ನು ಕಾಪಾಡಿದ್ದು, ತುಂಬಾ ಸಂತೋಷ ತಂದಿದೆ ಎಂದು ಮಗಳ ಸಾಧನೆಯ ಬಗ್ಗೆ ತಾಯಿ ಶಾಂತ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ನಮೃತಾ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅಲ್ಲದೇ ಈವರೆಗೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.