ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಬಾಲಾಪರಾಧಿಯನ್ನು ʼವಯಸ್ಕʼ ಎಂದು ಪರಿಗಣಿಸಲು ಸುಪ್ರೀಂ ಆದೇಶ
![ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಬಾಲಾಪರಾಧಿಯನ್ನು ʼವಯಸ್ಕʼ ಎಂದು ಪರಿಗಣಿಸಲು ಸುಪ್ರೀಂ ಆದೇಶ ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಬಾಲಾಪರಾಧಿಯನ್ನು ʼವಯಸ್ಕʼ ಎಂದು ಪರಿಗಣಿಸಲು ಸುಪ್ರೀಂ ಆದೇಶ](https://www.varthabharati.in/sites/default/files/images/articles/2022/11/16/356621-1668598110.jpg)
ಹೊಸದಿಲ್ಲಿ: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿ ಎಂದು ತೀರ್ಪು ನೀಡಿದ ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಇದೀಗ ಆರೋಪಿ ಶುಭಂ ಸಂಗ್ರಾ ಅವರನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದೆ.
2018ರಲ್ಲಿ ಜಮ್ಮು ಕಾಶ್ಮೀರದ ಕಥುವಾದ ದೇವಸ್ಥಾನವೊಂದರಲ್ಲಿ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಮಾಡಲಾಗುದ್ದು, ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಬಾಲಕಿಯನ್ನು 2018 ರ ಜನವರಿ 10 ರಂದು ಕಥುವಾದ ರಸಾನಾ ಪ್ರದೇಶದಿಂದ ಅಪಹರಿಸಿದ್ದ ತಂಡವು ಸ್ಥಳೀಯ ದೇವಾಲಯವೊಂದರಲ್ಲಿ ನಿರಂತರ ಸಾಮೂಹಿಕ ಅತ್ಯಾಚಾರ ಮಾಡಿತ್ತು. ಜನವರಿ 17 ರಂದು ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಪ್ರಕರಣದ 15 ಪುಟಗಳ ಚಾರ್ಜ್ಶೀಟ್ ಪ್ರಕಾರ , ಆರೋಪಿಗಳು ಆಕೆಯನ್ನು ಅಪಹರಿಸಿ, ಮಾದಕ ವಸ್ತು ನೀಡಿ, ಕಲ್ಲಿನಿಂದ ಹೊಡೆದು, ಅತ್ಯಾಚಾರ ಮಾಡಿ ದೇವಸ್ಥಾನದ ಆವರಣದಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.
2019 ರಲ್ಲಿ, ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಾಲಾಪರಾಧಿ ಎಂದು ಗುರುತಿಸಲಾದ ಸಂಗ್ರಾ ಎಂಬಾತನ ವಿಚಾರಣೆಯನ್ನು ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿತ್ತು.
ಸಂಗ್ರಾ ಬಾಲಾಪರಾಧಿ ಎಂಬ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಆದೇಶದ ವಿರುದ್ಧ ಜಮ್ಮು ಕಾಶ್ಮೀರದ ಆಡಳಿತವು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಅಂಗೀಕರಿಸಿದ್ದು, ಆರೋಪಿಯ ವಯಸ್ಸಿನ ಬಗ್ಗೆ ವೈದ್ಯಕೀಯ ತಜ್ಞರ ಅಂದಾಜು ಕೇವಲ ಅಭಿಪ್ರಾಯವಾಗಿದೆ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದ್ದಾರೆ.
"ಯಾವುದೇ ನಿರ್ಣಾಯಕ ಪುರಾವೆಗಳ ಅನುಪಸ್ಥಿತಿಯಲ್ಲಿ ವಯಸ್ಸಿನ ಬಗ್ಗೆ ವೈದ್ಯಕೀಯ ಅಭಿಪ್ರಾಯವನ್ನು ಆರೋಪಿಯ ವಯಸ್ಸಿನ ಶ್ರೇಣಿಯನ್ನು ನಿರ್ಧರಿಸಲು ಪರಿಗಣಿಸಬೇಕು" ಎಂದು ಅವರು ಹೇಳಿರುವುದಾಗಿ barandbench ವರದಿ ಮಾಡಿದೆ.
"ವೈದ್ಯಕೀಯ ಸಾಕ್ಷ್ಯವನ್ನು ಅವಲಂಬಿಸಬಹುದೇ ಅಥವಾ ಇಲ್ಲವೇ ಎಂಬುದು ಸಾಕ್ಷ್ಯದ ಮೌಲ್ಯವನ್ನು ಅವಲಂಬಿಸಿರುತ್ತದೆ." ಎಂದು ನ್ಯಾಯಪೀಠ ಹೇಳಿದೆ.