ಭದ್ರಾವತಿ | ಯುವಕರ ನಡುವೆ ಗಲಾಟೆ, ಚಾಕು ಇರಿತ ಪ್ರಕರಣ: 6 ಮಂದಿ ಆರೋಪಿಗಳ ಬಂಧನ
ಶಿವಮೊಗ್ಗ: ಕಳೆದ ರವಿವಾರ ಸಂಜೆ ಭದ್ರಾವತಿ ಪಟ್ಟಣದಲ್ಲಿ ಯುವಕರ ನಡುವೆ ಗಲಾಟೆ, ಚಾಕು ಇರಿತ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನ.13ರಂದು ಸಂಜೆ ಭದ್ರಾವತಿಯ ಜೂನಿಯರ್ ಕಾಲೇಜು ಬಳಿ ಝಹೀರ್, ಅಸ್ಲಂ ಮತ್ತು ಹರೀಶ್, ಗೌತಮ್ ಅಲಿಯಾಸ್ ಅಪ್ಪುಎಂಬುವವರ ಮಧ್ಯೆ ಗಲಾಟೆಯಾಗಿತ್ತು. ಈ ಸಂಬಂಧ ಝಹೀರ್ ಮತ್ತು ಹರೀಶ್ ಪ್ರತ್ಯೇಕವಾಗಿ ದೂರು ನೀಡಿದ್ದರು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು.
ಝಹೀರ್ ನೀಡಿದ ದೂರಿನ ಹಿನ್ನೆಲೆ ನೆಹರೂ ನಗರದ ಹರೀಶ್ (22) ಮತ್ತು ಗೌತಮ್ ಅಲಿಯಾಸ್ ಅಪ್ಪು (22) ಎಂಬುವವರನ್ನು ಬಂಧಿಸಲಾಗಿದೆ. ಹರೀಶ್ ನೀಡಿದ ದೂರಿನ ಹಿನ್ನೆಲೆ ಸಿದ್ದಾಪುರ ಹೊಸೂರು ಗ್ರಾಮದ ಝಹೀರ್ (27), ಎಕಿನ್ನಾ ಕಾಲೋನಿಯ ಅಸ್ಲಾಂ ಅಲಿಯಾಸ್ ಅಸ್ತಿ (29) ಎಂಬುವವರನ್ನು ಬಂಧಿಸಲಾಗಿದೆ.
► ಚಾಕು ಇರಿದ ಆರೋಪಿಯ ಬಂಧನ:
ಇನ್ನು, ಗಲಾಟೆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಝಹೀರ್ ನನ್ನು ನೋಡಲು ಹೋಗಿದ್ದ ರಿಝ್ವಾನ್ ಎಂಬಾತನಿಗೆ ಚಾಕುವಿನಿಂದ ಇರಿಯಾಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಹೊಸಮನೆಯ ಮಂಜುನಾಥ್ (24) ಮತ್ತು ಅಶೋಕ್ (22) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.