ಮತದಾರರ ಮಾಹಿತಿ ಕಳವು ಪ್ರಕರಣ: ಪ್ರಮುಖ ರೂವಾರಿ ಸೆರೆ, ಸಚಿವರೊಬ್ಬರ ಚೆಕ್ ಜಪ್ತಿ !
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಪ್ರಕರಣ ಸಂಬಂಧ ಪ್ರಮುಖ ರೂವಾರಿಯನ್ನು ಬಂಧಿಸಿರುವ ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಸಚಿವರೊಬ್ಬರ ಹೆಸರಿನ ಚೆಕ್ಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರವೂ ಕಾರ್ಯಾಚರಣೆ ಮುಂದುವರೆಸಿದ ತನಿಖಾ ತಂಡ, ಆರೋಪಿಗಳ ಮನೆ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಿತು. ಆನಂತರ, ಚಿಲುಮೆ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ, ಸಂಸ್ಥೆಯ ನಿರ್ದೇಶಕ ಕೆಂಪೇಗೌಡನನ್ನು ಬಂಧಿಸಲಾಗಿದೆ.
ಈತ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಮಾಹಿತಿ ಕಲೆಹಾಕಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಮತ್ತು ಕೆಂಪೇಗೌಡ ಯಾನೆ ಕೃಷ್ಣೇಗೌಡ ಇಬ್ಬರು ಪರಾರಿಯಾಗಿದ್ದರು. ಈ ಪೈಕಿ ಕೆಂಪೇಗೌಡ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಸಹ ಪ್ರಮುಖ ಸ್ಥಾನದಲ್ಲಿದ್ದು, ಚಿಲುಮೆ ನಡೆಸಿದ ಎಲ್ಲ ಸಮೀಕ್ಷೆ ಕಾರ್ಯಗಳ ಜವಾಬ್ದಾರಿ ಅವರೇ ವಹಿಸಿದ್ದರು ಎನ್ನಲಾಗಿದೆ.
ಈ ನಡುವೆ ರವಿಕುಮಾರ್ ಮತ್ತು ಕೆಂಪೇಗೌಡ ತಮ್ಮ ಪತ್ನಿಯರನ್ನು ಸಂಸ್ಥೆಗೆ ನಿರ್ದೇಶಕರನ್ನಾಗಿ ಮಾಡಿದ್ದು, ಹಲಸೂರು ಗೇಟ್ ಪೊಲೀಸರು ರವಿಕುಮಾರ್ ಪತ್ನಿ ಐಶ್ವರ್ಯ ಹಾಗೂ ಕೆಂಪೇಗೌಡ ಪತ್ನಿ ಶೃತಿ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೆಂಪೇಗೌಡನ ಪತ್ನಿ ಶ್ರುತಿ ಟಿ.ಬೇಗೂರಿನಲ್ಲಿರುವ ತೋಟದ ಮನೆಗೆ ದಾಖಲಾತಿಗಳನ್ನು ಸಾಗಿಸಿದ್ದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದ್ದು, ಪೊಲೀಸರ ತನಿಖೆ ವೇಳೆ ಆರೋಪಿಗಳು ಡಿಜಿಟಲ್ ಸಮೀಕ್ಷೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂಸ್ಥೆಯ ಕಚೇರಿ ಮೇಲೆ ಪೊಲೀಸರ ತಂಡ ದಾಳಿ ನಡೆಸಿದಾಗ ಸಚಿವರೊಬ್ಬರ ಹೆಸರಿನ ಚೆಕ್ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಕಚೇರಿಯಲ್ಲಿ ವಿವಿಧ ಬಿಲ್ಗಳು, ಸುಮಾರು ಐವತ್ತಕ್ಕೂ ಹೆಚ್ಚು ಕೆಲಸ ಮಾಡುವ ಗುರುತಿನ ಚೀಟಿಗಳು ಪತ್ತೆಯಾಗಿವೆ.
ಚಿಲುಮೆ ಸಂಸ್ಥೆಯ ಸಿಬ್ಬಂದಿ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ನನ್ನು 8 ದಿನ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 37ನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ಮಾಹಿತಿ ಸಂಗ್ರಹ ಆರೋಪ ಕೇಳಿಬಂದ ನಂತರ ಹಲಸೂರು ಗೇಟ್ ಠಾಣೆ ಪೊಲೀಸರು ಸಂಸ್ಥೆಯ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ ಎಂಬವರನ್ನು ಬಂಧಿಸಿದರು.
ಬಳಿಕ ಆರೋಪಿಗಳನ್ನು ಪೊಲೀಸರು 37ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಹೆಚ್ಚಿನ ವಿಚಾರಣೆಗೆಂದು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇದೇ ಪ್ರಕರಣ ಸಂಬಂಧ ಬಿಬಿಎಂಪಿ ಆರ್ ಒ, ಎಆರ್ ಒ ಸೇರಿದಂತೆ ಹಲವು ಸಿಬ್ಬಂದಿಗೆ ನೋಟಿಸ್ ನೀಡಿ ಶನಿವಾರ ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಪೊಲೀಸರು ಹೇಳಿದ್ದಾರೆ.
ಬಿಜೆಪಿ ದೂರು: ಕಾಂಗ್ರೆಸ್ ಆರೋಪಗಳು ದುರುದ್ದೇಶಪೂರಿತವಾಗಿವೆ. ಚುನಾವಣಾ ಆಯೋಗವು 2013 ರಿಂದಲೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಚುನಾವಣಾಧಿಕಾರಿಗೆ ಬಿಜೆಪಿಯು ದೂರು ಸಲ್ಲಿಸಿ ಮನವಿ ಮಾಡಿದೆ.
‘ಚಿಲುಮೆ ಸಂಸ್ಥೆಯಲ್ಲಿ ಸಚಿವರಿಗೆ ಸಂಬಂಧಿಸಿದ ಚೆಕ್ ದೊರಕಿದ್ದೇಕೆ? ಸಚಿವರ ಲೆಟರ್ ಹೆಡ್ಗೆ ಅಲ್ಲೇನು ಕೆಲಸ? ಆ ‘ಗಂಡು’ ಸಚಿವರಿಗೂ ಚಿಲುಮೆ ಸಂಸ್ಥೆಗೂ ಯಾವ ವ್ಯವಹಾರ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇದಕ್ಕೆಲ್ಲ ಉತ್ತರ ಬೇಕಲ್ಲವೇ? ಸಾಕ್ಷಿ ನಾಶಕ್ಕಾಗಿ ಕೇವಲ ಪೊಲೀಸ್ ತನಿಖೆಗೆ ಬಿಟ್ಟಿದ್ದೀರಾ? ನ್ಯಾಯಾಂಗ ತನಿಖೆಗೆ ಹಿಂದೇಟು ಏಕೆ?’
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ