ವಿಮೆ ಹಣಕ್ಕಾಗಿ ಗುತ್ತಿಗೆ ನೀಡಿ ತಂದೆಯನ್ನೇ ಹತ್ಯೆಗೈದ ಪುತ್ರ !
![ವಿಮೆ ಹಣಕ್ಕಾಗಿ ಗುತ್ತಿಗೆ ನೀಡಿ ತಂದೆಯನ್ನೇ ಹತ್ಯೆಗೈದ ಪುತ್ರ ! ವಿಮೆ ಹಣಕ್ಕಾಗಿ ಗುತ್ತಿಗೆ ನೀಡಿ ತಂದೆಯನ್ನೇ ಹತ್ಯೆಗೈದ ಪುತ್ರ !](https://www.varthabharati.in/sites/default/files/images/articles/2022/11/19/357017-1668880420.jpg)
ಭೋಪಾಲ (ಮಧ್ಯಪ್ರದೇಶ), ನ. 19: ಅಪಘಾತ ವಿಮೆಯ ಹಣಕ್ಕಾಗಿ ಗುತ್ತಿಗೆ ಕೊಲೆಗಾರರಿಂದ ಪುತ್ರನೇ ತಂದೆಯನ್ನು ಹತ್ಯೆ ನಡೆಸಿರುವ ಘಟನೆ ಬರ್ವಾನಿ ಜಿಲ್ಲೆಯಲ್ಲಿ ವರದಿಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅಪರಿಚಿತ ವಾಹನ ಢಿಕ್ಕಿಯಾಗಿ ತನ್ನ 52 ವರ್ಷದ ತಂದೆ ಮೃತಪಟ್ಟಿದ್ದಾರೆ ಎಂದು ವ್ಯಕ್ತಿಯೋರ್ವ ನವೆಂಬರ್ 10ರಂದು ಸೆಂಧ್ವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ಸಂದರ್ಭ ಈ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧೀಕ್ಷಕ ದೀಪಕ್ ಕುಮಾರ್ ಶುಕ್ಲಾ ಅವರು ಹೇಳಿದ್ದಾರೆ. ಅಪಘಾತದ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಇದು ಹತ್ಯೆ ಪ್ರಕರಣ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಅವರು ತಿಳಿಸಿದ್ದಾರೆ.
ತನಿಖೆಯ ಸಂದರ್ಭ ಶಂಕಿತ ಕರಣ್ ಶಿಂಧೆಯನ್ನು ಪುಣೆಯಿಂದ ಬಂಧಿಸಲಾಯಿತು. ವಿಚಾರಣೆ ಸಂದರ್ಭ ಆತ ಹತ್ಯೆಯಾದ ವ್ಯಕ್ತಿಯ ಪುತ್ರ ಹತ್ಯೆ ನಡೆಸಲು ತನಗೆ 2.5 ಲಕ್ಷ ರೂ. ನೀಡಿದ್ದ ಎಂದು ಬಹಿರಂಗಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಪುತ್ರನನ್ನು ವಿಚಾರಣೆ ನಡೆಸಿದಾಗ, ಆತ 10 ಲಕ್ಷ ರೂ. ಅಪಘಾತ ವಿಮೆಯನ್ನು ಪಡೆಯಲು ತಂದೆಯ ಹತ್ಯೆಗೆ ಗುತ್ತಿಗೆ ನೀಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಇಬ್ಬರನ್ನು ಕೂಡ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.