ಮಂಗಳೂರು : ಆಟೊ ರಿಕ್ಷಾದೊಳಗೆ ಬೆಂಕಿ ಕಾಣಿಸಿಕೊಂಡ ಪ್ರಕರಣ; ಎನ್ಐಎ ತಂಡ ಭೇಟಿ, ಪರಿಶೀಲನೆ

ಮಂಗಳೂರು : ಕಂಕನಾಡಿ ಪೊಲೀಸ್ ಠಾಣೆ ಸಮೀಪದ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೊ ರಿಕ್ಷಾದೊಳಗೆ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಎನ್ಐಎ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಘಟನೆ ಹಿನ್ನೆಲೆ: ಕಂಕನಾಡಿ ಪೊಲೀಸ್ ಠಾಣೆ ಸಮೀಪದ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೊ ರಿಕ್ಷಾದೊಳಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕ ಮತ್ತು ಚಾಲಕ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿತ್ತು.
ರಿಕ್ಷಾ ಚಾಲಕ, ಪ್ರಯಾಣಿಕ ಗಾಯಗೊಂಡಿದ್ದರು. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದ್ದು, ರಿಕ್ಷಾದ ಒಳಗಿನ ಕೆಲವು ಭಾಗಗಳು ಸುಟ್ಟು ಹೋಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಎನ್ಐಎ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಈ ಸ್ಫೋಟವು ಆಕಸ್ಮಿಕವಲ್ಲ. ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸೆಯಲಾಗಿದೆ. ಇದೊಂದು ಉಗ್ರ ಕೃತ್ಯವಾಗಿದೆ. ಈ ಬಗ್ಗೆ ರಾಜ್ಯ ಪೊಲೀಸರು ಕೇಂದ್ರ ತನಿಖಾ ತಂಡದೊಂದಿಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.