ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ಉಗಮದ ದಶಮಾನೋತ್ಸವ ಸಮಾರಂಭ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ನಲ್ಲಿ ಭಕ್ತಿ ಭಾವದೊಂದೊಂದಿಗೆ ಜರಗಿತು.
ಪರಮ ಪ್ರಸಾದ ಮೆರವಣಿಗೆಯ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಧಾರ್ಮಿಕ ಪ್ರವಚನ ನೀಡಿ, ಇಂದು ನಾವು ಕ್ರಿಸ್ತ ರಾಜರ ಮಹೋತ್ಸವ ವನ್ನು ಆಚರಿಸುತ್ತಿದ್ದು ಯೇಸುಕ್ರಿಸ್ತರು ಪ್ರತಿಯೊಬ್ಬರು ಶಾಂತಿ ಮತ್ತು ಕ್ಷಮೆಯ ದೂತರಾಗಬೇಕು ಎನ್ನುವ ಸಂದೇಶವನ್ನು ತನ್ನ ಜೀವನದಲ್ಲಿ ಬದುಕಿ ತೋರಿಸಿದ್ದು ಅದರಂತೆ ನಾವೂ ಕೂಡ ಅವರ ಮಾರ್ಗದಲ್ಲಿ ಸಾಗಬೇಕು ಎಂದರು.
ಬಲಿಪೂಜೆಯ ಬಳಿಕ ದಿವ್ಯ ಜ್ಯೋತಿ ನಿರ್ದೇಶಕ ವಂ.ಸಿರಿಲ್ ಲೋಬೊ ಪರಮಪ್ರಸಾದದ ಆರಾಧನೆಯನ್ನು ನೆರವೇರಿಸಿದರು. ತದನಂತರ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಮಿಲಾಗ್ರಿಸ್ ಕ್ಯಾಥೆಡ್ರಲ್ನಿಂದ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನವರೆಗೆ ಸಾರ್ವಜನಿಕ ವಾಗಿ ಕೊಂಡೊಯ್ದು ಗೌರವ ಸಲ್ಲಿಸಲಾಯಿತು.
ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮ ದಲ್ಲಿ ಉಡುಪಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ. ಜೋನ್ಸನ್ ಪವಿತ್ರ ಬೈಬಲ್ನ ವಾಚನ ನೆರವೇರಿಸಿ ಪರಮ ಪ್ರಸಾದ ಕುರಿತು ಸಂದೇಶ ನೀಡಿದರು. ಬಳಿಕ ಧರ್ಮಾಧ್ಯಕ್ಷರು ಪರಮ ಪ್ರಸಾದ ಸಾರ್ವಜನಿಕ ಆಶೀರ್ವಚನವನ್ನು ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ.ರೋಶನ್ ಡಿಸೋಜ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ.ಲೆಸ್ಲಿ ಡಿಸೋಜ, ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ನ ರೆಕ್ಟರ್ ವ.ವಲೇರಿಯನ್ ಮೆಂಡೊನ್ಸಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ.ಪಾವ್ಲ್ ರೇಗೊ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ರೊಕ್ ಡೆಸಾ, ಉದ್ಯಾವರ ಚರ್ಚಿನ ಧರ್ಮಗುರು ವಂ.ಸ್ಟ್ಯಾನಿ ಬಿ. ಲೋಬೊ, ಧರ್ಮಪ್ರಾಂತ್ಯದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಉಪಸ್ಥಿತರಿದ್ದರು. ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.
ಶಿಸ್ತುಬದ್ದ ಮೆರವಣಿಗೆ: ಪರಮ ಪ್ರಸಾದ ಮೆರವಣಿಗೆಯಲ್ಲಿ ಧರ್ಮ ಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿ ಯರು ಮತ್ತು 4000 ಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು, ಶಿಸ್ತುಬದ್ದವಾಗಿ ನಡೆಯಿತು.
ದಾರಿಯುದ್ದಕ್ಕೂ ಭಕ್ತಾದಿಗಳಿಗೆ ನೀಡಿದ ನೀರಿನ ಬಾಟಲಿಗಳು ಎಲ್ಲಿಯೂ ಎಸೆಯದಂತೆ ಸ್ವಯಂ ಸೇವಕರೇ ಸ್ವತಃ ಒಟ್ಟು ಮಾಡಿ ಸ್ವಚ್ಚತೆ ಕಾಪಾಡಿದರು ಅಲ್ಲದೆ ಭಾರತೀಯ ಕಥೊಲಿಕ ಯುವ ಸಂಚಾಲನದ ಸದಸ್ಯರು ರಸ್ತೆಯಲ್ಲಿ ಮೆರವಣಿಗೆ ಶಿಸ್ತುಬದ್ಧವಾಗಿ ಸಾಗಲು ಸಹಕರಿಸಿದರು.
ಧರ್ಮಪ್ರಾಂತ್ಯದ ದಶಮಾನೋತ್ಸವ ಸಂಭ್ರಮ
ಉಡುಪಿ ಧರ್ಮಪ್ರಾಂತ್ಯ ಆರಂಭವಾಗಿ ಹತ್ತು ವರ್ಷಗಳು ಸಂದಿದ್ದು ಇದರ ನೆನಪಿಗಾಗಿ ಅದ್ದೂರಿ ಸಂಭ್ರಮವನ್ನು ಮಾಡದೆ ಸಮುದಾಯದ ಅಗತ್ಯಕ್ಕಾಗಿ ಆರೋಗ್ಯ ನಿಧಿಗೆ ಧರ್ಮಾಧ್ಯಕ್ಷರು ಚಾಲನೆ ನೀಡಿದರು.
ಅಲ್ಲದೆ ಧರ್ಮಪ್ರಾಂತ್ಯದ ಚರಿತ್ರೆ, ಧರ್ಮಪ್ರಾಂತ್ಯದ ವ್ಯಾಪ್ತಿಗೊಳಪಟ್ಟ ಚರ್ಚುಗಳ ಚರಿತ್ರೆಗಳನ್ನೊಂಡ ಪುಸ್ತಕ ಗಳು ಮತ್ತು ಧರ್ಮಪ್ರಾಂತ್ಯದ ಹತ್ತು ವರ್ಷಗಳ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಧರ್ಮಪ್ರಾಂತ್ಯಕ್ಕೆ ತನ್ನ ನಿಸ್ವಾರ್ಥ ಹಾಗೂ ಪ್ರೀತಿ ಪೂರ್ವಕ ಸೇವೆ ನೀಡಿದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಧರ್ಮಾಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು.







