ಅತ್ಯಾಚಾರ, ಕೊಲೆ ಆರೋಪಿಗಳ ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಲಿರುವ ದಿಲ್ಲಿ ಸರ್ಕಾರ
![ಅತ್ಯಾಚಾರ, ಕೊಲೆ ಆರೋಪಿಗಳ ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಲಿರುವ ದಿಲ್ಲಿ ಸರ್ಕಾರ ಅತ್ಯಾಚಾರ, ಕೊಲೆ ಆರೋಪಿಗಳ ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಲಿರುವ ದಿಲ್ಲಿ ಸರ್ಕಾರ](https://www.varthabharati.in/sites/default/files/images/articles/2022/11/21/357153-1669020450.gif)
ಹೊಸದಿಲ್ಲಿ: 2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರ್ಕಾರ ಪ್ರಶ್ನಿಸಲಿದೆ.
ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಇಂದು ಬೆಳಿಗ್ಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅನುಮೋದನೆ ನೀಡಿದ್ದಾರೆ.
ಇತ್ತೀಚೆಗೆ ಎಲ್ಜಿಯನ್ನು ಭೇಟಿಯಾಗಿದ್ದ ಸಂತ್ರಸ್ತೆಯ ಪೋಷಕರು, ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು, ಅಲ್ಲದೆ ಭಯದಿಂದ ಪೊಲೀಸರ ರಕ್ಷಣೆಯನ್ನೂ ಕೋರಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಪ್ರಕರಣದಲ್ಲಿ ದಿಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ.
ನಿರ್ಭಯಾ ಪ್ರಕರಣಕ್ಕೆ ತಿಂಗಳುಗಳ ಮೊದಲು ದಿಲ್ಲಿಯ ಚಾವ್ಲಾದಲ್ಲಿ 2012 ರ ಫೆಬ್ರವರಿಯಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ಆರೋಪವನ್ನು ಈ ಮೂವರು ಆರೋಪಿಗಳು ಎದುರಿಸುತ್ತಿದ್ದರು. ಮೂರು ದಿನಗಳ ನಂತರ ಹರ್ಯಾಣದ ಹೊಲವೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ಫೆಬ್ರವರಿ 2014 ರಲ್ಲಿ ದಿಲ್ಲಿ ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಮರಣದಂಡನೆ ವಿಧಿಸಿತು. ಮರಣದಂಡನೆಯನ್ನು ದಿಲ್ಲಿ ಹೈಕೋರ್ಟ್ ಆಗಸ್ಟ್ 26 2014 ರಂದು ಎತ್ತಿ ಹಿಡಿದಿತ್ತು.
ಹೈಕೋರ್ಟ್ ತೀರ್ಪನ್ನು ಅವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ, ತಮ್ಮ ಶಿಕ್ಷೆಯನ್ನು ಕಡಿಮೆ ಮಾಡಬೇಕೆಂದು ಕೇಳಿಕೊಂಡಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ನವೆಂಬರ್ 7 ರಂದು ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದು, ಪ್ರಾಸಿಕ್ಯೂಷನ್ "ಆರೋಪಿಗಳ ವಿರುದ್ಧ ಸ್ಪಷ್ಟ ಪುರಾವೆಗಳನ್ನು" ಒದಗಿಸಲು ವಿಫಲವಾಗಿದೆ ಎಂದು ಹೇಳಿತ್ತು.