ಮೊರ್ಬಿ ಸೇತುವೆ ಕುಸಿತ ಭಾರೀ ದುರಂತ: ಸುಪ್ರೀಂ ಕೋರ್ಟ್
ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್ ಗೆ ಸೂಚನೆ
![ಮೊರ್ಬಿ ಸೇತುವೆ ಕುಸಿತ ಭಾರೀ ದುರಂತ: ಸುಪ್ರೀಂ ಕೋರ್ಟ್ ಮೊರ್ಬಿ ಸೇತುವೆ ಕುಸಿತ ಭಾರೀ ದುರಂತ: ಸುಪ್ರೀಂ ಕೋರ್ಟ್](https://www.varthabharati.in/sites/default/files/images/articles/2022/11/21/357204-1669046686.jpg)
ಹೊಸದಿಲ್ಲಿ,ನ.21: 140ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ಗುಜರಾತಿನ ಮೊರ್ಬಿ ತೂಗುಸೇತುವೆ (Morbi suspension bridge)ಕುಸಿತ ಭಾರೀ ದುರಂತವಾಗಿದೆ ಎಂದು ಸೋಮವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ಬಗ್ಗೆ ಈಗಾಗಲೇ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿರುವ ಗುಜರಾತ ಉಚ್ಚ ನ್ಯಾಯಾಲಯಕ್ಕೆ ನಿಯಮಿತವಾಗಿ ವಿಚಾರಣೆಗಳನ್ನು ನಡೆಸುವಂತೆ ಸೂಚಿಸಿತು.
ಇದೊಂದು ದೊಡ್ಡ ದುರಂತವಾಗಿದ್ದು,ಗುತ್ತಿಗೆ ನೀಡಿಕೆ,ಗುತ್ತಿಗೆ ಪಡೆದವರ ಅರ್ಹತೆ,ತಪ್ಪಿತಸ್ಥರ ಉತ್ತರದಾಯಿತ್ವ ಇತ್ಯಾದಿಗಳನ್ನು ಪರಿಶೀಲಿಸಲು ವಾರಕ್ಕೊಮ್ಮೆ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud)ಮತ್ತು ನ್ಯಾ.ಹಿಮಾ ಕೊಹ್ಲಿ (Justice Hima Kohli)ಅವರ ಪೀಠವು,ಗುಜರಾತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವು ಈಗಾಗಲೇ ಘಟನೆಯನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿರುವ ಮತ್ತು ಮೂರು ಆದೇಶಗಳನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ತಾನು ಅರ್ಜಿಗಳ ವಿಚಾರಣೆಯನ್ನು ನಡೆಸುವುದಿಲ್ಲ ಎಂದು ಹೇಳಿತು.
ಆದಾಗ್ಯೂ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಮತ್ತು ದುರಂತದಲ್ಲಿ ತಮ್ಮ ಇಬ್ಬರು ಬಂಧುಗಳನ್ನು ಕಳೆದುಕೊಂಡಿರುವ ಇನ್ನೋರ್ವ ಅರ್ಜಿದಾರರಿಗೆ ಉಚ್ಚ ನ್ಯಾಯಾಲಯಕ್ಕೆ ತೆರಳಲು ಅನುಮತಿ ನೀಡಿತು. ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಮೃತರ ಕುಟುಂಬಗಳಿಗೆ ಗೌರವಾನ್ವಿತ ಪರಿಹಾರವನ್ನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರು ನಂತರ ತನ್ನನ್ನು ಸಂಪರ್ಕಿಸಬಹುದು ಎಂದೂ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.
ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ತೂಗುಸೇತುವೆ ಅ.30ರಂದು ಕುಸಿದ ಪರಿಣಾಮ 47 ಮಕ್ಕಳು ಸೇರಿದಂತೆ 140ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.