ಗೋಮೂತ್ರದಿಂದ 'ಶುದ್ಧೀಕರಿಸಿದ' ಪ್ರಕರಣ: ಗ್ರಾಮಕ್ಕೆ ತೆರಳಿ ದಲಿತರಿಗೆ ಟ್ಯಾಂಕ್ ನೀರು ಕುಡಿಸಿದ ಅಧಿಕಾರಿ
ಆರೋಪಿ ವಿರುದ್ಧ FIR ದಾಖಲು
![ಗೋಮೂತ್ರದಿಂದ ಶುದ್ಧೀಕರಿಸಿದ ಪ್ರಕರಣ: ಗ್ರಾಮಕ್ಕೆ ತೆರಳಿ ದಲಿತರಿಗೆ ಟ್ಯಾಂಕ್ ನೀರು ಕುಡಿಸಿದ ಅಧಿಕಾರಿ ಗೋಮೂತ್ರದಿಂದ ಶುದ್ಧೀಕರಿಸಿದ ಪ್ರಕರಣ: ಗ್ರಾಮಕ್ಕೆ ತೆರಳಿ ದಲಿತರಿಗೆ ಟ್ಯಾಂಕ್ ನೀರು ಕುಡಿಸಿದ ಅಧಿಕಾರಿ](https://www.varthabharati.in/sites/default/files/images/articles/2022/11/21/357206-1669047520.gif)
ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಕಿರು ನೀರು ಸರಬರಾಜು ಟ್ಯಾಂಕ್ನ ನೀರು ಖಾಲಿ ಮಾಡಿ, ಶುದ್ಧೀಕರಣಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರವಿವಾರ ಸಂಜೆ ಪ್ರಕರಣ ದಾಖಲಾಗಿದೆ.
ಗ್ರಾಮದ ಪರಿಶಿಷ್ಟ ಸಮುದಾಯದ ಮುಖಂಡ ಗಿರಿಯಪ್ಪ ದೂರು ನೀಡಿದ್ದು, ಅದೇ ಗ್ರಾಮದ ವೀರಶೈವ ಮುಖಂಡ ಮಹದೇವಪ್ಪ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆನ್ನಲಾಗಿದೆ.
ಅಧಿಕಾರಿಗಳ ಸಭೆ: ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ತಹಶೀಲ್ದಾರ್ ಬಸವರಾಜು ಅವರು ಗ್ರಾಮಕ್ಕೆ ರವಿವಾರ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದರು. ಬಳಿಕ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ತಾಲೂಕು, ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿವಿಧ ಬೀದಿಗಳಲ್ಲಿರುವ ಟ್ಯಾಂಕ್ಗಳ ನೀರನ್ನು ಪರಿಶಿಷ್ಟ ಜಾತಿಯವರು ಕುಡಿಯುವಂತೆ ಮಾಡಿ, ‘ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವುದಿಲ್ಲ’ ಎಂಬ ಸಂದೇಶ ನೀಡಿದರು.
ದೂರಿನಲ್ಲೇನಿದೆ?: 'ನ.18ರಂದು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವಕನ ಮದುವೆಗೆ ಬಂದಿದ್ದ ಶಿವಮ್ಮ (ಮಹದೇವಮ್ಮ) ಮಧ್ಯಾಹ್ನ ಊಟ ಮುಗಿಸಿ ಹೋಗುವಾಗ ಕೃಷ್ಣರಾಯ ದೇವಸ್ಥಾನದ ಬಳಿಯ ನೀರಿನ ಟ್ಯಾಂಕ್ ನಿಂದ ಹೋಗಿ ನೀರು ಕುಡಿದರು. ಆಗ, ವೀರಶೈವ ಮುಖಂಡ ಮಹದೇವಪ್ಪ (ಪಟ್ಟವಾಡಿ) ಎಂಬಾತ ಗಲಾಟೆ ಮಾಡಿ, ಜಾತಿ ನಿಂದನೆ ಮಾಡಿರುವುದಾಗಿ ಗಿರಿಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಟ್ಯಾಂಕ್ನ ನೀರು ಖಾಲಿ ಮಾಡಿಸಿ, ಶುದ್ಧೀಕರಣ ಮಾಡಿರುವ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ.