ಉಡುಪಿ: ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ

ಉಡುಪಿ: ಉಡುಪಿ ನಗರಸಭೆ ಹಾಗೂ ದಾವಣಗೆರೆಯ ಸಿತಾರ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನ (ನಗರ)ದ ಅಡಿಯಲ್ಲಿ ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ ನಗರದ ಕಿದಿಯೂರು ಹೋಟೆಲ್ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಬೀಡು ವಾರ್ಡಿನ ನಗರಸಭಾ ಸದಸ್ಯ ಟಿ.ಜಿ ಹೆಗ್ಡೆ ಮಾತನಾಡಿ, ಉಡುಪಿ ನಗರ ಸಭೆಯು ಸ್ವಚ್ಛತೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸ್ವಚ್ಚ ಸರ್ವೇಕ್ಷಣಾ -2022ರಲ್ಲಿ ರಾಜ್ಯದಲ್ಲಿ ಉಡುಪಿ ನಗರವು ಮೊದಲ ಸ್ಥಾನ ಪಡೆಯಲು ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದೊಡ್ಡ ಹೋಟೆಲ್ಗಳಲ್ಲಿ ಹಸಿಕಸ ನಿರ್ವಹಣೆ ಕ್ಲಿಷ್ಟಕರವಾಗಿದ್ದು, ಈ ಜಾಗೃತಿ ಕಾರ್ಯಕ್ರಮದಿಂದ ಹಸಿಕಸ ನಿರ್ವಹಣೆ ಸಾಧ್ಯ ಎಂದರು.
ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಮಾತನಾಡಿ, ನಗರದ ಜನರು ಸ್ವಚ್ಛತೆಗಾಗಿ ಸಹಕಾರ ನೀಡುತ್ತಿದ್ದು, 2021ರ ಸ್ವಚ್ಚ ಸರ್ವೇಕ್ಷಣೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷದಲ್ಲಿ ಇನ್ನೂ ಹೆಚ್ಚಿನ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸ್ವಚ್ಛ ಸರ್ವೇಕ್ಷಣ್-2022 ರಲ್ಲಿ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಉಡುಪಿ ಮೊದಲ ಸ್ಥಾನ ಪಡೆಯ ಬಹುದು. ಸ್ವಚ್ಛತೆ ಕಾಪಾಡುವುದರ ಜೊತೆಗೆ ಎಲ್ಲರೂ ಸ್ವಚ್ಛತಾ ಆ್ಯಪ್ನ್ನು ಡೌನ್ಲೋಡ್ ಮಾಡಿ ಅದರಲ್ಲಿ ಉತ್ತಮ ಶ್ರೇಯಾಂಕ ನೀಡುವಂತೆ ತಿಳಿಸಿದರು.
ನಗರಸಭೆಯ ಸ್ವಚ್ಛತಾ ರಾಯಭಾರಿ ಜೋಸೆಫ್ ಜಿ.ಎಂ. ರೆಬೆಲ್ಲೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಹಿರಿಯ ಆರೋಗ್ಯ ಸಹಾಯಕಿ ಶಶಿರೇಖಾ, ಕಿದಿಯೂರು ಹೊಟೇಲ್ನ ಫಾಜೀಮ್ ಹಾಗೂ ಇತರರು ಭಾಗವಹಿಸಿದ್ದರು. ಸಿತಾರ ಸಂಸ್ಥೆಯ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.







