ಮಂಗಳೂರು | ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ, ಮಾಹಿತಿ ಆಧಾರ ರಹಿತ: ಕಮಿಷನರ್ ಶಶಿಕುಮಾರ್ ಸ್ಪಷ್ಟನೆ

ಮಂಗಳೂರು, ನ.22: ನಗರದ ಹೊರವಲಯದಲ್ಲಿ ಆಟೋದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮದಲ್ಲಿ ಆರೋಪಿ ಇನ್ನೋರ್ವನ ಜತೆ ಬಂದಿದ್ದ ಎಂಬ ವೀಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಲಾಗಿದೆ. ಆದರೆ ವೀಡಿಯೋ ಪ್ರಕರಣದ ಆರೋಪಿಯದ್ದಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಸಂತ್ರಸ್ತ ಆಟೋ ಚಾಲಕ ಹಾಗೂ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಇಬ್ಬರು ಯುವಕರು ಬ್ಯಾಗ್ನೊಂದಿಗೆ ವೈನ್ಶಾಪ್ಗೆ ಹೋಗಿದ್ದಾರೆ. ಮಸೀದಿಗೆ ಹೋಗಿದ್ದಾರೆ ಎಂಬ ವೈರಲ್ ವೀಡಿಯೋಗೂ ಪ್ರಕರಣದ ಆರೋಪಿಗೂ ಸಂಬಂಧವಿಲ್ಲ. ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದವರು ಇಂತಹ ಅನಧಿಕೃತ ವಿಷಯಗಳನ್ನು ಪರಿಗಣಿಸಬಾರದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಹಾಗೂ ಶ್ವಾನ ದಳ ಸೇರಿದಂತೆ ಪೊಲೀಸರಿಂದ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಅದಲ್ಲದೆ,ಮಾಲ್, ಆಸ್ಪತ್ರೆ, ಬಸ್ಸು, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಜನರಲ್ಲಿ ಸ್ಥೈರ್ಯ ತುಂಬುವ ಕಾರ್ಯವನ್ನೂ ನಡೆಸಲಾಗುತ್ತಿದೆ. ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ಸುಧಾರಿಸುತ್ತಿದೆ. ಪ್ರಕರಣದ ಆರೋಪಿಯ ಚಿಕಿತ್ಸೆ ಮುಂದುವರಿದಿದೆ. ಆತನಿಗೆ ಗಂಭೀರವಾಗಿ ಗಾಯವಾಗದ ಕಾರಣ ಇನ್ನೂ ವಿಚಾರಣೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ವೈದ್ಯರು ಆರೋಪಿಯು ಆರೋಗ್ಯವಾಗಿದ್ದು, ವಿಚಾರಣೆ ನಡೆಸಬಹುದು ಎಂದು ದೃಢಪಡಿಸಿದ ಬಳಿಕ ಬಂಧಿಸಿ ವಿಚಾರಣೆ ನಡೆಸಲಾಗುವುದು. ಸದ್ಯ ಆರೋಪಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.







