ಸಮುದಾಯಗಳ ನಡುವೆ ದ್ವೇಷ ಸೃಷ್ಟಿಯೇ ಪ್ರಮುಖ ಉದ್ದೇಶ: ಡಿಜಿಪಿ
ಮಂಗಳೂರು: ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ

ಮಂಗಳೂರು, ನ.23: ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿಯನ್ನು ಕದಡುವುದು, ಸಾರ್ವಜನಿಕವಾಗಿ ಭಯ ಹುಟ್ಟಿಸುವುದು ಇಂತಹ ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ಪ್ರಮುಖ ಉದ್ದೇಶವಾಗಿರುತ್ತದೆ ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಗೃಹ ಸಚಿವರ ಜತೆ ಸಭೆಯ ಬಳಿಕ ಸುದ್ದಿಗಾರರ ಜತೆ ಆರೋಪಿ ಹಿಂದೂ ಹೆಸರನ್ನು ಇಟ್ಟುಕೊಂಡು ನಕಲಿ ಐಡಿಯನ್ನೂ ಹೊಂದಿದ್ದ ಕುರಿತಂತೆ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಆತನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರಲಿದೆ. ಎನ್ಐಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆಗೆ ಆರಂಭದಿಂದಲೂ ಇವೆ. ಅಧಿಕೃತವಾಗಿ ಸದ್ಯದಲ್ಲೇ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಆಗಲಿದೆ ಎಂದು ಅವರು ಹೇಳಿದರು.
ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ನಡೆಯುತ್ತಿದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಬಾಡಿಗೆ ನೀಡಿದವರನ್ನು ಸೇರಿದಂತೆ ಹಲವು ಜನರನ್ನ ವಶಕ್ಕೆ ಪಡೆಯುತ್ತೇವೆ. ಆದರೆ ಅವರು ಆರೋಪಿಗಳೇ ಆಗಿರಲ್ಲ. ವಿಚಾರಣೆಗೆ ಕರೆಸುತ್ತೇವೆ. ಆದರೆ ಮಾಧ್ಯಮದವರು ಅವರನ್ನು ಅಪರಾಧಿಗಳ ತರ ತೋರಿಸಬಾರದು ಎಂದು ಡಿಜಿಪಿ ಪ್ರವೀಣ್ ಸೂದ್ ಈ ಸಂದರ್ಭ ಮನವಿ ಮಾಡಿದರು.
ಬೆಂಗಳೂರು ಸೇರಿ ಎಂಟು ಕಡೆ ದಾಳಿ ನಡೆಸಿ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಗೋಡೆಬರಹ ಪ್ರಕರಣದ ಬಳಿಕ ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದರೂ ಆತನ ಮೇಲೆ ನಿಗಾ ಇರಿಸದಿರುವುದು ಇಲಾಖೆಯ ವೈಫಲ್ಯವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ಸಂದರ್ಭದಲ್ಲೂ ಎಲ್ಲಾ ರೀತಿಯಲ್ಲೂ ತನಿಖೆಯ ಪ್ರಯತ್ನ ನಡೆದಿದೆ ಎಂದರು.
ಆರೋಪಿಗಳಿಗೆ ಹಣಕಾಸಿನ ಮೂಲದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಅದರ ಬಗ್ಗೆ ಹೆಚ್ಚಿನದೇನೂ ಹೇಳಲಾಗದು. ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಹಂತದಲ್ಲಿ ಏನೇ ಹೇಳಿದರೂ ತನಿಖೆಗೆ ಬಾಧಕವಾಗಲಿದೆ ಎಂದು ಅವರು ಹೇಳಿದರು.
ಈ ಹಿಂದೆ ನಡೆದಿರುವ ಹಲವಾರು ಪ್ರಕರಣಗಳಿಗೆ ಸಂಬಂಧಿಸಿ ಮನೆ ಅಥವಾ ವಾಹನಗಳನ್ನು ಬಾಡಿಗೆ ನೀಡುವ ಸಂದರ್ಭ ಸ್ಥಳೀಯ ಪೊಲೀಸ್ ಠಾಣೆಗಳಿಂದ ಪರಿಶೀಲನೆ ನಡೆಸುವಂತೆ ಸಾರ್ವಜನಿಕರಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೇರಿದಂತೆ ಯಾವುದೇ ರೀತಿಯ ಗುರುತಿನ ಚೀಟಿ ಕಳೆದುಹೋದಾಗ ಈ ಬಗ್ಗೆ ಸ್ಥಳೀಯ ಠಾಣೆಗಳಿಗೆ ಅಥವಾ ಸದ್ಯ ಲಭ್ಯ ಇರುವ ಇಲಾಸ್ಟ್ ಆ್ಯಪ್ ಮೂಲಕ ದೂರು ಸಲ್ಲಿಸಿದರೆ ನಕಲಿ ಗುರುತಿನ ಚೀಟಿ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
-ಪ್ರವೀಣ್ ಸೂದ್, ಡಿಜಿಪಿ