ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೈಸೂರು ದಸರಾ ಗಜಪಡೆಯ ಗೋಪಾಲಸ್ವಾಮಿ ಆನೆ ಸಾವು
ಮೈಸೂರು,ನ.23: ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡು ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದ ಆನೆ ಗೋಪಾಲಸ್ವಾಮಿ ಮೃತಪಟ್ಟಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಳ್ಳಿ ವೃತ್ತದಲ್ಲಿ ನಡೆದಿದೆ.
ಇಂದು ಕಾಡಿನಲ್ಲಿ ಮೇಯಲು ತೆರಳಿದ್ದ ಸಾಕಾನೆ ಗೋಪಾಲಸ್ವಾಮಿಗೆ ಕಾಡಾನೆ ತಿವಿದಿದೆ ಎಂದು ತಿಳಿದು ಬಂದಿದೆ.
ಕಾಡಿನಲ್ಲಿ ಆನೆಗಳು ಘೀಳಿಡುವ ಶಬ್ಧ ಅತಿಯಾದಾಗ ಅನುಮಾನಗೊಂಡ ಮಾವುತರು ಹಾಗೂ ಕಾವಾಡಿಗಳು ಸ್ಥಳಕ್ಕೆ ಹೋದಾಗ ಗೋಪಾಲಸ್ವಾಮಿ ಮೃತಪಟ್ಟಿತ್ತೆನ್ನಲಾಗಿದೆ.
ಹಿಂದೆ ಅರಣ್ಯದಂಚಿನಲ್ಲಿರುವ ರೈತರ ಗದ್ದೆಗಳಿಗೆ ದಾಳಿ ಮಾಡಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿದು, ಪಳಗಿಸಿ ಗೋಪಾಲಸ್ವಾಮಿ ಎಂದು ಹೆಸರಿಡಲಾಗಿತ್ತು. ಈ ಬಾರಿ ಕೂಡ ಈತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದ.
39 ವರ್ಷದ ಗೋಪಾಲಸ್ವಾಮಿ ಆನೆಯ ಸಾವು ಪ್ರಾಣಿ ಪ್ರಿಯರಲ್ಲಿ ದುಃಖ ತರಿಸಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಗೋಪಾಲಸ್ವಾಮಿ ಹುಣಸೂರಿನ ಮತ್ತಿಗೋಡು ಶಿಬಿರದಲ್ಲಿ ಕಾಡಾನೆ ಜೊತೆ ಕಾದಾಡಿ ಸಾವನ್ನಪ್ಪಿರುವ ಸುದ್ದಿ ತಿಳಿದು ಬೇಸರವಾಯಿತು. ಗಜರಾಜನ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿಃ https://t.co/QufpUhvlk0
— Basavaraj S Bommai (@BSBommai) November 23, 2022