ಮೇಯರ್ ಸ್ಥಾನ ದೊರೆತಲ್ಲಿ ಮೀರತ್ಗೆ ಗೋಡ್ಸೆ ನಗರವೆಂದು ಮರುನಾಮಕರಣ: ಹಿಂದೂ ಮಹಾಸಭಾ ‘ಭರವಸೆ’!
![ಮೇಯರ್ ಸ್ಥಾನ ದೊರೆತಲ್ಲಿ ಮೀರತ್ಗೆ ಗೋಡ್ಸೆ ನಗರವೆಂದು ಮರುನಾಮಕರಣ: ಹಿಂದೂ ಮಹಾಸಭಾ ‘ಭರವಸೆ’! ಮೇಯರ್ ಸ್ಥಾನ ದೊರೆತಲ್ಲಿ ಮೀರತ್ಗೆ ಗೋಡ್ಸೆ ನಗರವೆಂದು ಮರುನಾಮಕರಣ: ಹಿಂದೂ ಮಹಾಸಭಾ ‘ಭರವಸೆ’!](https://www.varthabharati.in/sites/default/files/images/articles/2022/11/23/357472-1669220579.jpeg)
ಮೀರತ್,ನ.23: ಉತ್ತರಪ್ರದೇಶಾದ್ಯಂತ ಡಿಸೆಂಬರ್ ತಿಂಗಳಲ್ಲಿ ನಗರಾಡಳಿತ ಸಂಸ್ತೆಗಳ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ಒಂದು ವೇಳೆ ಮೀರತ್ನಲ್ಲಿ ತನ್ನ ಅಭ್ಯರ್ಥಿಯು ಮೇಯರ್ ಆಗಿ ಆಯ್ಕೆಯಾದಲ್ಲಿ ನಗರಕ್ಕೆ ‘ನಾಥುರಾಮ್ಗೋಡ್ಸೆ ನಗರ್’ ('Nathuramgodse Nagar')ಮರುನಾಮಕರಣಗೊಳಿಸುವುದಾಗಿ ಹಿಂದೂ ಮಹಾಸಭಾ ಮಂಗಳವಾರ ಘೋಷಿಸಿದೆ.
ಅಲ್ಲದೆ ಮೀರತ್ ಜಿಲ್ಲೆಯಲ್ಲಿ ಮುಸ್ಲಿಂ ನಂಟಿರುವ ಹೆಸರುಗಳಿರುವ ವಿವಿಧ ಸ್ಥಳಗಳಿಗೆ ಮಹಾನ್ ಹಿಂದೂ ಪುರುಷರ ಹೆಸರುಗಳನ್ನಿಡಲಾಗುವುದೆಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಶರ್ಮಾ(Ashok Sharma) ತಿಳಿಸಿದ್ದಾರೆ.
ನಗರದಲ್ಲಿರುವ ಎಲ್ಲಾ ಸ್ಥಾನಗಳಿಗೂ ತನ್ನ ಪಕ್ಷವು ದೇಶಭಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹಿಂದೂ ಮಹಾಸಭಾದ ಮೀರತ್ ಘಟಕದ ಅಧ್ಯಕ್ಷ ಅಭಿಷೇಕ್ ಅಗರವಾಲ್ ತಿಳಿಸಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಮೊದಲ ಭರವಸೆಯಾಗಿದ್ದು, ಪ್ರತಿಯೊಬ್ಬ ಹಿಂದೂವು ಗೋವಿನ ರಕ್ಷಣೆ ಮಾಡುವುದು ಖಾತರಿಪಡಿಸುವುದು ನಾವು ಮಾಡಲಿರುವ ಎರಡನೆ ಕೆಲಸವಾಗಿದೆ. ಮತಾಂತರಗಳನ್ನು ಹಾಗೂ ಮುಸ್ಲಿಂ ತುಷ್ಟೀಕರಣ ರಾಜಕೀಯವನ್ನು ತಡೆಯುವ ನಿಟ್ಟಿನಲ್ಲಿಯೂ ಹಿಂದೂ ಮಹಾಸಭಾ ಕೆಲಸ ಮಾಡುತ್ತಿದೆ ಎಂದು ಅಗರವಾಲ್ತಿಳಿಸಿದರು.
ಬಿಜೆಪಿ ಹಾಗೂ ಶಿವಸೇನೆಯು ತಮ್ಮ ಸಿದ್ಧಾಂತದಿಂದ ದೂರ ಸರಿಯುತ್ತಿವೆಯೆಂದು ಅಗರವಾಲ್ ಆಪಾದಿಸಿದರು.