ಇತಿಹಾಸದ ತಿರುಚುವಿಕೆಗಳನ್ನು ಸರಿಪಡಿಸುವುದರಿಂದ ಈಗ ಯಾರು ನಮ್ಮನ್ನು ತಡೆಯುತ್ತಾರೆ?: ಅಮಿತ್ ಶಾ
![ಇತಿಹಾಸದ ತಿರುಚುವಿಕೆಗಳನ್ನು ಸರಿಪಡಿಸುವುದರಿಂದ ಈಗ ಯಾರು ನಮ್ಮನ್ನು ತಡೆಯುತ್ತಾರೆ?: ಅಮಿತ್ ಶಾ ಇತಿಹಾಸದ ತಿರುಚುವಿಕೆಗಳನ್ನು ಸರಿಪಡಿಸುವುದರಿಂದ ಈಗ ಯಾರು ನಮ್ಮನ್ನು ತಡೆಯುತ್ತಾರೆ?: ಅಮಿತ್ ಶಾ](https://www.varthabharati.in/sites/default/files/images/articles/2022/11/25/357674-1669374278.jpg)
ಹೊಸದಿಲ್ಲಿ: ಭಾರತದ ಇತಿಹಾಸವನ್ನು (History) ಭಾರತಕ್ಕೆ ಸಂದರ್ಭೋಚಿತವಾಗಿ ಮರುರಚಿಸುವ ಅಗತ್ಯವಿದೆ ಹಾಗೂ ಸರಕಾರ ಇಂತಹ ಪ್ರಯತ್ನಗಳನ್ನು ಬೆಂಬಲಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
"ನಾನು ಇತಿಹಾಸ ವಿದ್ಯಾರ್ಥಿ. ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ, ಅದನ್ನು ತಿರುಚಲಾಗಿದೆ ಎಂಬ ದೂರು ಆಗಾಗ ಕೇಳಿ ಬರುತ್ತಿದೆ. ಅದು ಸರಿಯಿರಬಹುದು, ಅದನ್ನು ಸರಿಪಡಿಸಬೇಕಿದೆ,'' ಎಂದು ಅಸ್ಸಾಂ ಸರ್ಕಾರ ದಿಲ್ಲಿಯಲ್ಲಿ 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಪುಖನ್ ಅವರ 400ನೇ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
"ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸುವುದರಿಂದ ಯಾರು ನಮ್ಮನ್ನು ತಡೆಯುತ್ತಿದ್ದಾರೆ-ನಾನು ನಿಮ್ಮನ್ನು ಕೇಳುತ್ತಿದ್ದೇನೆ,'' ಎಂದು ಶಾ ಹೇಳಿದರು.
"ದೇಶದಲ್ಲಿ ಎಲ್ಲಿಯಾದರೂ 150 ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ 30 ರಾಜಮನೆತನಗಳ ಕುರಿತು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಕುರಿತು ಸಂಶೋಧನೆ ನಡೆಸಿ ಎಂದು ಇಲ್ಲಿರುವ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ಗಳಿಗೆ ಹೇಳಲು ಬಯಸುತ್ತೇನೆ, ಈ ಕುರಿತು ಸಾಕಷ್ಟು ಬರೆದಾಗ, ಇತಿಹಾಸ ಸರಿಯಿಲ್ಲ ಎಂಬ ವಿಚಾರ ಇಲ್ಲವಾಗುವುದು,'' ಎಂದು ಹೇಳಿದ ಅಮಿತ್ ಶಾ, ಇಂತಹ ಸಂಶೋಧನೆಗೆ ಕೇಂದ್ರ ಬೆಂಬಲ ನೀಡಲಿದೆ ಎಂದರು.
"ಮುಂದೆ ಬನ್ನಿ, ಸಂಶೋಧನೆ ನಡೆಸಿ, ಇತಿಹಾಸ ಮರುರಚಿಸಿ. ಈ ರೀತಿ ನಾವು ಭವಿಷ್ಯದ ತಲೆಮಾರಿಗೂ ಸ್ಫೂರ್ತಿ ನೀಡಬಹುದಾಗಿದೆ ಇತಿಹಾಸದ ತಿರುಚುವಿಕೆಗಳನ್ನು ಸರಿಪಡಿಸುವುದರಿಂದ ಈಗ ಯಾರು ನಮ್ಮನ್ನು ತಡೆಯುತ್ತಾರೆ?,'' ಎಂದು ಅವರು ಹೇಳಿದರು.
ಇದನ್ನೂ ಓದಿ: ಸಚಿನ್ ಪೈಲಟ್ ವಿರುದ್ಧ ಅಶೋಕ್ ಗೆಹ್ಲೋಟ್ ವಾಗ್ದಾಳಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ…